Sunday, June 10, 2012

ಭಾಷೆ, ಭಾಷಾಂತರ ಮತ್ತು ಅವಾಂತರ !

ನನ್ನ ಮನೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ 'ಪದ್ಮುಂಜ' ಎನ್ನುವ ಹಳ್ಳಿಯೊಂದರಲ್ಲಿ. ನನ್ನ ಅಪ್ಪ-ಅಮ್ಮ ಇಬ್ಬರೂ ಹಿಂದಿ ಭಾಷೆಯ ಪದವೀಧರರು. ಅಪ್ಪ ಕೃಷಿಕ; ಅಮ್ಮ ಹಿಂದಿ ಶಿಕ್ಷಕಿ. ಹೀಗಾಗಿ, ರಜಾ ದಿನಗಳಲ್ಲಿ ಕೆಲವಷ್ಟು ಹುಡುಗರು 'ಹಿಂದಿ ಪಾಠ' ಹೇಳಿಸಿಕೊಳ್ಳಲು ಆಗಾಗ ಮನೆಗೆ ಬರುತ್ತಿದ್ದರು. ಮನೆಗೆ ಯಾರೇ ಬರಲಿ; ಬಂದವರ ಜೊತೆ ಹಿಂದಿಯಲ್ಲೇ ಮಾತನಾಡಬೇಕೆಂದು ಮನೆಪಾಠಕ್ಕೆ ಬರುವ ಹುಡುಗರಿಗೆ ಅಪ್ಪ-ಅಮ್ಮ ಖಡಕ್ಕಾಗಿ ಹೇಳಿಯಾಗಿತ್ತು.


ಆ ದಿನ ಸಂಜೆ ವೇಳೆ ಪಕ್ಕದ ಮನೆಯ ಹರೀಶಣ್ಣ ಒಂದು ದೂರು ಕೊಡೋದಕ್ಕೋಸ್ಕರ ಮನೆಗೆ ಬಂದಿದ್ದರು. 'ನಮ್ಮ ಮನೆಯ ದನ ಅವರ ತೋಟದಲ್ಲಿ ಮೇಯುತ್ತಾ ಇದೆ' ಅನ್ನೋದು ಆ ದೂರು. ಹರೀಶಣ್ಣನೂ ಒಂದು ಕಾಲದಲ್ಲಿ ಅಮ್ಮನ ವಿದ್ಯಾರ್ಥಿಯೇ! ಹೀಗಾಗಿ, ಆ ದೂರನ್ನು 'ಹಿಂದೀಕರಿಸಿ' ಹೇಳಿದ್ದು ಹೀಗೆ:
"ಹಮಾರೇ ಪೆತ್ತ ತುಮ್ಹಾರೆ ಪಿತ್ತಿಲ್ ಮೇ ಮೇಯ್ತಾ ಹೈ. ಕ್ಯಾ ಕರ್ನಾ?"
'ಪೆತ್ತ' ಎಂದರೆ ತುಳುವಿನಲ್ಲಿ ದನ. ಪಿತ್ತಿಲ್ ಎಂದರೆ ಹಿತ್ತಿಲು. ಹರೀಶಣ್ಣನ ದೂರನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂದಿತ್ತು!

*****

ಪತ್ರ ಬರೆಯುವ ಕಲೆ, ಈಗಿನ ಬಹು ಮಂದಿಗೆ ಗೊತ್ತೇ ಇಲ್ಲವೇನೋ! ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಅಪ್ಪ ಆಗಾಗ ಅಂಚೆ ಕಾರ್ಡ್ಗಳನ್ನೂ ತಂದಿತ್ತು, ಅಜ್ಜಿ, ಮಾವಂದಿರಿಗೆ ನಮ್ಮ ಕೈಯಲ್ಲಿ ಪತ್ರ ಬರೆಸುತ್ತಿದ್ದರು.
ಅದು ನಾನು ಬರೆದ ಮೊದಲ ಪತ್ರ. ನನ್ನ ಅಜ್ಜಿ (ಅಪ್ಪನ ಅಮ್ಮ)ಗೆ ಆ ಪತ್ರ ಬರೆದಿದ್ದೆ. ಬರೆದ ನಂತರ ಪರಿಶೀಲನೆಗಾಗಿ ಅಪ್ಪನ ಕೈಗಿತ್ತೆ. ಮನಸೊಳಗೇ ನಕ್ಕ ಅಪ್ಪ, ಆ ಪತ್ರವನ್ನು ಅಮ್ಮನ ಕೈಗಿತ್ತರು. ಅಮ್ಮ ನಕ್ಕರೂ ಗುಟ್ಟು ಬಿಟ್ಟು ಕೊಡಲಿಲ್ಲ. ನಾನು ಮತ್ತೆರಡು ಬಾರಿ ಪತ್ರ ಓದಿಕೊಂಡರೂ ತಪ್ಪೇನೆನ್ನುವುದು ತಿಳಿಯಲೇ ಇಲ್ಲ. ಮರುದಿನ ನನ್ನ ತರಗತಿಯಲ್ಲಿ (ಅಮ್ಮ ನನ್ನ ಶಿಕ್ಷಕಿಯಾಗಿದ್ದರು ಕೂಡ) ಎಲ್ಲರೆದುರು ಮರ್ಯಾದೆ ತೆಗೆಯಬೇಕೆ?!


"ಅಜ್ಜಿಯವರಲ್ಲಿ ಬೇಡುವ ಆಶೀರ್ವಾದಗಳು"- ಎನ್ನಬೇಕಾಗಿದ್ದದ್ದು "ಅಜ್ಜಿಯವರಿಗೆ ಮಾಡುವ ಆಶೀರ್ವಾದಗಳು" ಎಂದಾಗಿತ್ತು. ಬರೆಯಬೇಕಾದರೆ ನನ್ನ ಭಾವನೆ ಸರಿಯಾಗಿತ್ತು. ಅಕ್ಷರದ ರೂಪ ಬೇರೆಯಾಗಿತ್ತು!


"ಮನುಷ್ಯನ ಮಾತಿಗೆ ಅರ್ಥವಿಲ್ಲ; ಭಾವನೆಗೆ ಅರ್ಥವಿರೋದು" ಅಂತ ಕವಿಯೊಬ್ಬರು ಹೇಳಿದ್ದಾರೆ. ಹೌದು; 'ಕುಡಿಯುವ ನೀರು' ಅಂತ ಬೋರ್ಡು ಇರುತ್ತೆ; ನೀರನ್ನು ಕುಡಿಯಬಹುದು ಅಂತ ಅರ್ಥ. 'ಕಚ್ಚುವ ನಾಯಿ' ಅಂತ ಬೋರ್ಡು ಇರುತ್ತೆ; ನಾಯಿಯನ್ನು ಕಚ್ಚ ಬಹುದು ಅಂತಲೇ ?!


*****


ಶಾಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ, ಅಮ್ಮ ಉತ್ತರ ಪತ್ರಿಕೆಗಳನ್ನು ತಿದ್ದಲು ಮನೆಗೆ ತರುವುದು ಮಾಮೂಲು. ಮೊನ್ನೆ ಊರಿಗೆ ಹೋಗಿದ್ದಾಗ, ಅಮ್ಮನ ಮೇಜಿನ ಮೇಲೆ ಒಂದಷ್ಟು ಉತ್ತರ ಪತ್ರಿಕೆಗಳು ಕಂಡವು. 'ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ' ಎಂಬ ಮುಖ್ಯ ಪ್ರಶ್ನೆಯತ್ತ ಕುತೂಹಲದಿಂದ ಕಣ್ಣಾಡಿಸಿದೆ. "ತುಲಸೀ ಹರ್ ಘರ್ ಕೀ ಆಂಗನ್ ಕೀ ಶೋಭಾ ಹೋತೀ ಹೈ" - ಎನ್ನುವುದನ್ನು ಹೀಗೆಲ್ಲಾ ಅನುವಾದಿಸಲಾಗಿತ್ತು. :


-> "ತುಳಸೀ ದಾಸರು ಪ್ರತಿ ಮನೆಯ ಅಂಗಳದಲ್ಲೂ ಶೋಭಿಸುತ್ತಾರೆ"


-> "ತುಳಸೀ ಗಿಡ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತದೆ" (greenhouse effect???)


-> "ತುಳಸಿ ಮನೆಯ ಅಂಗಳದ ತುಂಬೆಲ್ಲಾ ಶೋಭಿಸುತ್ತಿರುತ್ತದೆ"


ಪ್ರತಿ ವರುಷ ತುಲಸೀ ದಾಸರ 'ದೋಹಾ'ದ ಮೇಲೆ ಪ್ರಶ್ನೆ ಖಾಯಂ ಆಗಿ ಬರುತ್ತದಂತೆ. ಈ ವರುಷ ಇದೇ ಆ ಪ್ರಶ್ನೆ ಎಂದುಕೊಂಡ ವಿದ್ಯಾರ್ಥಿಗಳು ಹೀಗೆಲ್ಲಾ ಅನುವಾದಿಸಿದ್ದರು!!!


*****


ಭಾಷೆಯನ್ನೋದೇ ಹಾಗೆ. ಅದರ ಶೈಲಿ, ನಾವು ಯೋಚಿಸುವ ಶೈಲಿ ಎರಡೂ ಒಂದೇ ನೇರ ರೇಖೆಯಲ್ಲಿರುತ್ತವೆ. ಮಾತಿನಲ್ಲಿ ಕನ್ನಡ, ಇಂಗ್ಲೀಷ್ ಎಂದೆಲ್ಲಾ ಇರುವ ಹಾಗೆ ನಮ್ಮ ಸಾಫ್ಟ್ ವೇರ್ ಭಾಷೆಗಳಲ್ಲೂ ಸಿ, ಸಿ ಪ್ಲಸ್ ಪ್ಲಸ್, ಜಾವ ಎಂದೆಲ್ಲಾ ಹಲವು ಪ್ರಬೇಧಗಳು. ಒಬ್ಬ ಯಾವುದಾದರೂ ಒಂದು ಭಾಷಾ ನಿಷ್ಣಾತ ಆಗಿದ್ದರೆ ಸಾಕು, ಆತನನ್ನು  ಬುದ್ದಿವಂತ ಎಂದು ಪರಿಗಣಿಸಲಾಗುತ್ತದೆ. ಉಳಿದ ಭಾಷೆಗಳಲ್ಲೂ ಅದೇ ರೀತಿಯ 'logic'ಗಳು ಇರುತ್ತವೆ ಅನ್ನೋದು ಹಿಂಬದಿಯ ಸತ್ಯ.
ಇನ್ನು ನಮ್ಮ ಎಫ್ ಎಂ ರೇಡಿಯೋ ಕಾರ್ಯಕ್ರಮ ನಿರೂಪಕರ ವಿಷಯಕ್ಕೆ ಬರೋಣ. ಹಲವು ಭಾಷೆಗಳನ್ನು ಕಟ್ ಪೇಸ್ಟ್ ಮಾಡಿ, ಕೊನೆಯಲ್ಲೊಂದಷ್ಟು ಅಚ್ಚಗನ್ನಡದ ಒಗ್ಗರಣೆ ಹಾಕಿ ರಾತ್ರೋ ರಾತ್ರಿ ಜನಪ್ರಿಯರಾಗುತ್ತಾರೆ ಇವರು! ಮೊನ್ನೆ ಒಂದು ಎಫ್ ಎಂ ರೇಡಿಯೋ ನಿರೂಪಕ ಮಹಾಶಯನೊಬ್ಬ "ಈಗ sky is bending ಹಾಡು ಬರ್ತಾ ಇದೆ...  ಕೇಳಿ ಕೇಳಿಸ್ತಾ ಇರಿ" ಅಂದ. "ಗಗನವೇ ಬಾಗಿ ಭುವಿಯನು ... "ಎನ್ನುವ ಹಾಡು ಬಂದಾಗ ನಾನೊಮ್ಮೆ ದಂಗಾಗಿ ಬಿಟ್ಟೆ!


ತಪ್ಪಾಗಿ ಮಾತನಾಡುವುದು ಮಾಮೂಲಿಯಾಗಿ ಬಿಟ್ಟಿದೆ, ರೂಢಿಯಾಗಿ ಬಿಟ್ಟಿದೆ. 'ಬೃಹತ್ ಮಹಿಳೆಯರ ಸಮಾವೇಶ', 'ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ', 'ಉಚಿತ ಕಣ್ಣಿನ ಶಸ್ತ್ರ  ಚಿಕಿತ್ಸೆ', 'ಮಾಜಿ ಕರ್ನಾಟಕದ ಮುಖ್ಯ ಮಂತ್ರಿ' ಮುಂತಾದ ಪದಪುಂಜಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. 'ಬೃಹತ್ ಮಹಿಳೆಯರು' ಎಂದರೇನು? ಭಾಗವಹಿಸಲು ಬೇಕಾದ 'ಮಿನಿಮಮ್ ಸೈಜ್' ಅರ್ಹತೆಯನ್ನೂ ಅಲ್ಲಿಯೇ ನಮೂದಿಸಬೇಕಲ್ಲವೇ?!


*****


ರಾಜ್ಯಗಳನ್ನು ಭಾಷಾವಾರು ಹಂಚಿಕೆ ಮಾಡಿ ತುಂಬಾ ಸಮಯವಾಯಿತು. ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳಿ. ಶಾಸ್ತ್ರೀಯ ಸ್ಥಾನ-ಮಾನ ಪಡೆದ, ಪಡೆಯದ ಎಲ್ಲಾ ಭಾಷೆಗಳೂ ಇಲ್ಲಿ ಗುಯ್ ಗುಡುತ್ತಿರುತ್ತವೆ. ನಮ್ಮ ವಿಶಾಲ ಹೃದಯವಂತಿಕೆ ಗೊತ್ತೇ ಇದೆಯಲ್ಲ? ನಾವಾಗಿಯೇ ಅನ್ಯರ ಭಾಷೆಯನ್ನು ಗೌರವಿಸಿ ಅದರಲ್ಲೇ ಮಾತನಾಡಿಸುತ್ತೇವೆ. ತಪ್ಪು-ಸರಿಗಳ ಲೆಕ್ಕಾಚಾರ ನಿಮಗೆ ಬಿಟ್ಟದ್ದು. ಆದರೆ ಮಾತನಾಡುವ 'ಭಾವನೆ' ಮಾತ್ರ ಸ್ವಂತದ್ದಾಗಿದ್ದರೆ ಚೆಂದ.


*****


ನಾನು ಮನೆ ಬಿಟ್ಟು ಮೈಸೂರು ಬಂದ ದಿನಗಳಲ್ಲಿ ನನ್ನ 'ಮಂಗಳೂರು ಕನ್ನಡ'ದ ಬಗ್ಗೆ ಹಲವಾರು 'ಕಮೆಂಟು'ಗಳು ಬಂದಿದ್ದವು. "ಎಂತದು ಮಾರಾಯರೇ? ಮಂಡೆ ಬೆಚ್ಚ ಮಾಡಬೇಡಿ" ಎಂಬ ತಮಾಷೆಯ ಪ್ರತಿಕ್ರಿಯೆಯ ಜೊತೆಗೆ "ಅದೇನಪ್ಪ? ಬರೆದದ್ದನ್ನೇ ಮಾತನಾಡುತ್ತೀರಾ!" ಅಂತ ಆಶ್ಚರ್ಯವೂ ಜೊತೆಗೂಡುತ್ತಿತ್ತು. ಬರೆದಂತೆಯೇ ಮಾತನಾಡಬಹುದಾದ ಕೆಲವೇ ಭಾಷೆಗಳಲ್ಲಿ  ಕನ್ನಡವೂ ಒಂದು! ಇರಲಿ; ಮುಂದೊಂದು ದಿನ 'ಸ್ಪಷ್ಟವಾಗಿ ಕನ್ನಡ ಮಾತನಾಡುವುದೇ ಗಿನ್ನೆಸ್ ದಾಖಲೆಗೆ ಸೇರಿಸಬಹುದಾದ ಸಾಧನೆ' ಎಂದಾಗ ಬಹುದೇನೋ!
"ಅಣ್ಣಾ, ಅಯ್ಯಾ, ತಮ್ಮಾ, ಶ್ರೀಯುತರೇ" -ಗಳು "ಲೋ, ಮಚಾ, ಮಗಾ, ಗುರೂ"-ಗಳಾಗುತ್ತಿವೆ!
ಅಪ್ಪಟ ಕನ್ನಡ ಹಳೆಗನ್ನಡವಾಗುತ್ತಿದೆ!


*****


'ಮಾತಿನಿಂ ನಡೆ-ನುಡಿಯು, ಮಾತಿನಿಂ ಹಗೆ-ಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕೆ
ಮಾತೇ ಮಾಣಿಕವು ಸರ್ವಜ್ಞ'
-ಅಂತ ಸರ್ವಜ್ಞ ಹೇಳಿಲ್ಲವೇ?

ಈಗ ಮೊದಲನೇ ವಾಕ್ಯದ ವಿಶ್ಲೇಷಣೆ ಮಾಡೋಣ. ಮಾತಿನಂತೆಯೇ ಮನುಷ್ಯನ ವ್ಯವಹಾರ ಅನ್ನೋದು ಮೊದಲನೇ ವಾಕ್ಯವಾಯಿತು. ನಮ್ಮ ಇಂದಿನ ವ್ಯವಹಾರವನ್ನೇ ನೋಡಿ: ನಮ್ಮದಲ್ಲದವರ, ಪರ-ದೇಶಿಗಳ ಕೆಲಸವನ್ನು ಮಾಡುತ್ತೇವೆ. ಪರರ ಭಾಷೆಯನ್ನೇ ಆಡುತ್ತೇವೆ. ಆದರೆ ನನಗೊಂದು ಜಿಜ್ಞಾಸೆ. ನಮ್ಮ ಮಾತಿನಿಂದಾಗಿಯೇ ಪರರ ಕೆಲಸ(ವ್ಯವಹಾರ)ವನ್ನು ಮಾಡಬೇಕಾಯಿತೆ? ಅಥವಾ, ಇಂತಹ ಕೆಲಸದಿಂದಾಗಿಯೇ ಪರರ ಭಾಷೆಯನ್ನು ಆಡಬೇಕಾಯಿತೇ?
ಜೀವನಾಧಾರಕ್ಕಾಗಿ ಈ ವ್ಯವಹಾರವನ್ನು ಮಾಡುತ್ತಿದ್ದೇನೆ. ಹಾಗಾಗಿಯೇ ಮಾತೂ ಬದಲಾಗಿ ಬಿಟ್ಟಿದೆ. "ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎನ್ನುವ ದಾಸರ ಕೀರ್ತನೆಯನ್ನು ಹಾಡುವುದರೊಂದಿಗೆ ಸರ್ವಜ್ಞನ ವಚನದ ವಿಶ್ಲೇಷಣೆಯನ್ನು ನಿಲ್ಲಿಸಬೇಕಾಗುತ್ತದೆ!


ಮೂಗನೊಬ್ಬ ನಮ್ಮ ಬೆಂಗಳೂರಿನ ಬಾಡಿಗೆ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದಾನೆ. ನಮ್ಮ ಬಡಾವಣೆಯ ಬಹುಪಾಲು ಎಲ್ಲರ ಮನೆಯ ಕೆಲಸವನ್ನೂ ಮಾಡುತ್ತಾನೆ. ದಿನ ಪತ್ರಿಕೆ, ಹಾಲು ಮೊಸರು ಹಾಕುವುದು, ಕಸ ಗುಡಿಸುವುದು, ಗಾರೆ ಕೆಲಸ , ಹೀಗೆ ಹಲವು ಕೆಲಸಗಳನ್ನು ಮಾಡುತ್ತಾನೆ. "ನಿನಗೆ ಮಾತನಾಡಲು ಬರುತ್ತಿದ್ದರೆ ಏನು ಮಾಡುತ್ತಿದೆ?" ಎಂದು ಕೇಳಿದರೆ, "ಇದೇ ಕೆಲಸವನ್ನೇ ಮಾಡುತ್ತಿದೆ. ನನ್ನ ಮಟ್ಟಿನಲ್ಲಿ ಮಾತಿಗೂ ಜೀವನಕ್ಕೂ ಆಷ್ಟೇನೂ ಸಂಬಂಧವಿಲ್ಲ" ಎನ್ನುವುದನ್ನು ನಟನೆಯ ಮೂಲಕವೇ ತೋರಿಸುತ್ತಾನೆ.


"ಒಂದು ಸಾರಿ ಆ ಸರ್ವಜ್ಞನಿಗೆ ಈತನನ್ನು ತೋರಿಸಬೇಕು" -ಎಂದು ಆಗಾಗ ಅನಿಸುತ್ತದೆ!
*****


ಆಂಗ್ಲ ಭಾಷಾ ಮೋಹವಿದೆ ಎಂದ ಮಾತ್ರಕ್ಕೆ ಜನರೆಲ್ಲಾ 'ಆಂಗ್ಲ ಭಾಷಾ ಪಂಡಿತ'ರಾಗುತ್ತಿದ್ದಾರೆ ಅಂದುಕೊಂಡರೆ ಅದು ಶುದ್ಧ ತಪ್ಪು. ಅಲ್ಲೂ ತಪ್ಪು ಮಾಮೂಲು. 'I am is a boy' ಎಂದು ಚಿಕ್ಕವನಿದ್ದಾಗ ಶಿಕ್ಷಕರೊಬ್ಬರು ಹೇಳಿ ಕೊಟ್ಟ ನೆನಪು ನನಗೆ! ಇನ್ನು ಕೆಲವೊಂದು ಬಾರಿ ಪರಿಶುದ್ಧತೆ ಅತಿರೇಕಕ್ಕೆ ಹೋಗುವುದುಂಟು. 'pipe under test' ಅನ್ನುವ ಎಚ್ಚರಿಕೆಯ ಫಲಕದ ಕೆಳಗಡೆ 'ಪೈಪ್ ಕೆಳಗಡೆ ಪರೀಕ್ಷೆ' ಅಂತ word-to-word ಭಾಷಾಂತರಿಸಿದ್ದು ಬೆಂಗಳೂರಿನ ಹೊರ ವರ್ತುಲ ರಸ್ತೆಯುದ್ದಕ್ಕೂ ಇತ್ತೀಚೆಗೆ  ಕಂಡು ಬಂದಿತ್ತು. 'ಪಾಶ್ಚಾತ್ಯಮಿತ್ಯೇವ ನ ಸಾಧು ಸರ್ವಂ' ಅನ್ನೋದು ನಮ್ಮ ಜನಕ್ಕೆ ಯಾವಾಗ ಕಂಡು ಬರುತ್ತೋ!


"ಭಾವನೆಗೆ ಮಾತ್ರ ಅರ್ಥ ಇರೋದು ಅಂತ ನೀವೇ ಹೇಳಿದಿರಲ್ಲ? ಮತ್ಯಾಕೆ ಮಾತಿನಲ್ಲಿ ತಪ್ಪು ಕಂಡು ಹುಡುಕುತ್ತೀರ?" ಎಂದು ಕೇಳಿದವರಿಗೆ 'ತಪ್ಪು ಮಾತನಾಡಿದರೆ ತಪ್ಪು ಭಾವನೆಯೇ ಬರುತ್ತೆ' ಎಂದು ಹೇಳಲು ಮೇಲಿನವು ಎರಡು ಉದಾಹರಣೆಗಳು!


*****
ನಮ್ಮಲಿ ಭಾಷಾ ವೈವಿಧ್ಯತೆ ಇರುವುದು ಹೇಗೆ ಹೆಮ್ಮೆ ಪದ ಬೇಕಾದ ವಿಷಯವೋ, ಹಾಗೆಯೇ ಪದಗಳ ದುರ್ಬಳಕೆಯನ್ನು ಮಾಡುವುದು ವಿಷಾದನೀಯ ಸಂಗತಿ. ಭಾಷೆಯನ್ನು ಬಳಸುವಾಗ 'best', 'most' 'worst' ಮೊದಲಾದ 'superlative' ಪದಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕೇ ಹೊರತು ಎಲ್ಲಾ ಕಡೆ ಬಳಸಬಾರದು ಎನ್ನುವುದು ಬಲ್ಲವರ ಮಾತು. ಇಂದಂತೂ 'better than the best' ನಂತಹ ಪದ-ಪುಂಜಗಳೇ ಎಲ್ಲೆಡೆ ಕೇಳಿ ಬರುತ್ತಿವೆ, ಜನಪ್ರಿಯವಾಗುತ್ತಿವೆ. ಗೋಡೆ ಬರಹಗಳು, ಜಾಹೀರಾತುಗಳು, ರೇಡಿಯೋ ಮೊದಲಾದ ಮಾಧ್ಯಮಗಳಲ್ಲೂ ಮಿಂಚುತ್ತಿವೆ! ನಮ್ಮ ನಿಜವಾದ ಶ್ರೀಮಂತಿಕೆ ಮರೆಯಲ್ಲೇ ಉಳಿಯುತ್ತಿದೆ.


ಒಂದು ವೇಳೆ ಇಂದು ಬೆಂಗಳೂರಿಗೆ ನ್ಯೂಟನ್ನನು ಬಂದರೆ, ನ್ಯೂಟನ್ನನ ಬೆಂಗಳೂರಿನ ನಿಯಮಗಳು' ಈ ರೀತಿ ಬರ ಬಹುದೇನೋ!:


-> ನಿಯಮ ೧: ಭಾಷಾ ಶುದ್ಧತೆಯು ಯೋಚನಾ ಶುದ್ಧತೆಗೆ ನೇರ ಅನುಪಾತದಲ್ಲಿರುತ್ತದೆ.


-> ನಿಯಮ ೨: ಸಾಮಾನ್ಯವಾಗಿ, ನೀವೇ ಸ್ವಯಂ ಪ್ರೇರಿತರಾಗಿ ಕನ್ನಡದಲ್ಲಿ ಮಾತನಾಡದಿದ್ದರೆ, ನಿಮ್ಮೆದುರಿಗಿರುವ 'ಬೆಂಗಳೂರು ಕನ್ನಡಿಗರು' ಅನ್ಯ ಭಾಷೆಯನ್ನು ಉಪಯೋಗಿಸುವುದನ್ನು ಮುಂದುವರಿಸುತ್ತಾರೆ.


-> ನಿಯಮ ೩: ಬೆಂಗಳೂರಿಗೆ ಹತ್ತಿರವಿದ್ದಷ್ಟು ನಿಮ್ಮ ಕನ್ನಡದಲ್ಲಿ ಅನ್ಯ ಭಾಷಾ ಪದ ಪ್ರಯೋಗ ಜಾಸ್ತಿ ಇರುತ್ತದೆ.


ಇವೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯ. 'ಅವರವರ ಮನದಂತೆ ದೃಷ್ಟಿಯೂ ಬೇರೆ' ಅಂತ ಕವಿ ದಿನಕರ ದೇಸಾಯಿಯವರು ಹೇಳಿದ್ದಾರೆ.
ನೀವೇನಂತೀರಾ?

*****

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...