Friday, November 19, 2021

Work from home- ಮನೆಯಿಂದ ಕೆಲಸ


ಬೆಳಗ್ಗೆ ಒಂಭತ್ತೂವರೆಗೆ ಮೀಟಿಂಗು. ರಾತ್ರಿ ಒಂಭತ್ತೂವರೆಗೂ.  
ಮಧ್ಯಾಹ್ನ ರಾತ್ರಿ ಊಟಕ್ಕೆ ಬ್ರೇಕು. ಟೀ ಕಾಫಿ home-officeಗೇ ಸಪ್ಪ್ಲೈ ಅಮ್ಮನಿಂದ.  
"ನಾಳೆಯಿಂದ ಬೇಗ ಲಾಗ್ಔಟ್ ಮಾಡ್ಬೇಕು. ಸಂಜೆ ಒಂದು ವಾಕ್ ಮಾಡ್ಬೇಕು" -ನನ್ನ ಸ್ವಗತ 

ಸರಿ, ಮಲಗುವ ಈಗ.
ಅರೆ! ಪುಟ್ಟ ಮಗಳು ಎಲ್ಲಿ? ಹಳೇ ಹೆಡ್ ಫೋನ್ ಹಾಕ್ಕೊಂಡು ಮೀಟಿಂಗ್ ಆಟ ಅಂತೆ!
"ಮೀಟಿಂಗ್ ಮುಗಿಸಿಯೇ ಚಾಚಿ ಮಾಡೋದು" - ಮಗಳ ಹಠ; ನಿದ್ದೆ ಕಣ್ಣಿನಲ್ಲಿ 
ಸ್ವಲ್ಪ ಸಾಕಾಯ್ತು; ಅವಳ ಹಠ ಬಿಡಿಸಿ ಮಲಗಿಸಿ, ನಾನೂ ನಿದ್ರಾ ಪರವಶನಾಗಲು

******* 

ಇವತ್ತು ಕೆಲಸ ಸ್ವಲ್ಪ ಕಮ್ಮಿ ಇದೆ. ಒಂದು blocker issueಗೆ ಫಿಕ್ಸ್ ಬರುವ ತನಕ ಏನೂ ಮಾಡಕ್ಕಾಗಲ್ಲ. ಹೇಳ್ತಾ ಇದ್ದೆ breakfast ಹೊತ್ತಲ್ಲಿ.
"ಬ್ಯಾಂಕ್ ಗೆ ಹೋಗಿ ಸ್ವಲ್ಪ ಕ್ಯಾಷ್ ತೊಗೊಂಡು ಬಾ; ಖರ್ಚಿಗೆ ಬೇಕು. ಹಾಗೆಯೇ ನ್ಯೂಸ್ ಪೇಪರೂ ಕೂಡ " - ಅಮ್ಮನ ಆರ್ಡರ್.
ಹೊರಟೆ. ಅಂಗಡಿಯಲ್ಲಿ ಹಲವಾರು ಜನ. ಎಲ್ಲಾ ಪರಿಚಯದವರೇ ಇಲ್ಲಿ ಹಳ್ಳಿಯಲ್ಲಿ.

ದಾದ ಬಟ್ರೆ, ಬೇಲೆ ಇಜ್ಜಾ? 
ಬೇಲೆದ ನಡುಟು ಇಂಚಿ ಬರ್ರಗ್ ಅಪುಂಡಾ?
ಕೋವಿಡ್ ಬತ್ತುಂಡಲ ಈರೆಗ್ ಸಂಬಲ ಬರ್ಪು೦ಡತ್ತಾ!
ನನ ಮೂಲೆನ ?

"Blocker issue is fixed; can you confirm  if it works now?" ವಾಟ್ಸಾಪ್ ನಲ್ಲಿ ಮೆಸ್ಸೇಜ್ ಬಂತು. ಕಿಕ್ ಸ್ಟಾರ್ಟ್ ಮಾಡಿ ವಾಪಸ್ ಮನೆಗೆ ಬಂದೆ. 
"ಅಂಗಡಿಯಲ್ಲಿ ತುಂಬಾ ರಶ್ಶ್ ಇತ್ತಾ? ಅಥವಾ ಬ್ಯಾಂಕ್ ಸರ್ವರ್ ಡೌನಾ?" ಅಮ್ಮನ ಪ್ರಶ್ನೆ.  
ಸಂಜೆ ಆಯಿತು, ಅರೆ! ಸಂಜೆ ಅಲ್ಲ, ರಾತ್ರಿ ಹತ್ತು! ಯಾರಿಗ್ಗೊತ್ತು! ನಾಳೆಯಾದರೂ ವಾಕ್ ಮಾಡಬೇಕು.
******


ವಾಪಾಸ್ ಬರ್ತೀರಾ? -ಅಂತ ಆಫೀಸ್ನಲ್ಲಿ ಸರ್ವೇ ಶುರು ಆಗಿದೆ. 
ತ್ರಿಶಂಕು ಸ್ಥಿತಿ. ಏನು ಹೇಳಲಿ! "ಒಮ್ಮೊಮ್ಮೆ ಬರುವೆ" ಅಂತ ಅಂದೆ. 
'ಆಫೀಸಿಗೆ ಹೋದರೆ ಸ್ವಲ್ಪ ಹೊಟ್ಟೆ ಕರಗಬಹುದು, ಕೂತು ತಿಂದು ಸಜ್ಜಾಗಿದ್ದೇನೆ' ಬೊಜ್ಜು ತುಂಬಿದ ಗೆಳೆಯನೂ ಅಂದ. 


ಟೀವಿ ಆನ್ ಮಾಡಿದೆ. 
ಪರ್ಮನೆಂಟ್ ಮನೆಯಿಂದಲೇ ಕೆಲಸ ಅಂದ ಕಂಪೆನಿಗಳೆಲ್ಲ ವಾಪಾಸ್ ಕರೀತಾ ಇವೆ. 
ವರ್ಕ್ ಫ್ರಮ್ ಹೋಮ್ - ಯಾರಿಗೆ ಲಾಭ ಯಾರಿಗೆ ನಷ್ಟ?
ನ್ಯೂಸ್ ಚಾನೆಲ್ ಅನಾಲಿಸ್ ನಡೀತಾ ಇತ್ತು. ಇವರಿಗಂತೂ ಲಾಭ ಅಂದ್ಕೊಂಡೆ. 
ಇರಲಿ.  ಸಾಕಾಗಿದೆ. ಒಮ್ಮೆ ಆಫೀಸ್ ಹೋಗಬೇಕು. 

****

Covid pandemic gave most of the software engineers an opportubity to stay together with the family (of all the various categories, IT job has/had longest WFH in this situation). A person like me would have never imagined staying inside  the house- 14 years after staying away from parents. 

Write up is purely for fun. Stay safe.

Wednesday, January 20, 2021

ಪ್ರತೀಕ್ಷೆ


ಮೇಘಗಳ ನಾದವಂ ಕೇಳಿ ಗರಿಬಿಚ್ಚಿ 
ನವಿಲಿಂದಿಂದು ಮನದುಂಬಿ  ಕುಣಿಯುತಿಹುದು 
ಮಿನುಗು ತಾರೆಯ ನಡುವೆ ನಗುವ ಚಂದ್ರನ ತೆರದಿ 
ಎನ್ನ ಮನವಿಂದಿಂದು ನಲಿಯುತಿಹುದು 

ಅಂದು ಆ ಮಂದಹಾಸದಿ ಸ್ವಾಗತಿಸಿ ಕರೆದ 
ಇಂದುವದನೆಯು ಮನವ ಕರಗಿಸಿದಳು 
ಕರಗಿ ನೀರಾದೆನ್ನ ಮನ ಶರಧಿಯಲಿ ಹಾಯಿ 
ಯನು ನಡೆಸಿ ತೀರವನು ಸೇರಿಸಿದಳು 

ಎನ್ನ ಮನಃ ಪಟಲದೊಳು ನೆಲೆಗೊಂಡ ನೆನಪುಗಳು 
ಕನಸಾಗಿ ಆಕೆಯನು ನೆನೆಯುತಿಹವು 
ಕನಸು ಒಂದೊಂದಾಗಿ ಗರಿಬಿಚ್ಚಿ ಹಾರುತಲಿ 
ಬಾಳ ಬಾನನ್ನು ಅತಿಕ್ರಮಿಸುತಿಹವು 

ಮೌನದಲ್ಲಭ್ಯಂಗ ಮಾಡಿದಂತಹ ಬೆಡಗಿ 
ಬರುವಿಕೆಗೆ ಪ್ರತಿಸಂಧ್ಯೆ ಕಾಯುತಿಹುದು 
ಬಾಳ ಅಗ್ಗಡಲಿನೊಳು ಕ್ರಮಿಸಲಿಹ ದೂರಕಿ 
ನ್ನಿವಳ ಸಾಮೀಪ್ಯವದು ದೊರಕಲಿಹುದು 

Friday, December 28, 2018

ಬೇಕಾಗಿದೆ ಮರುಜೀವ!




ಆ ಹೂವಲ್ಲಿ ಕಂಪಿಲ್ಲ. 
ಅದು ಟೀವಿಯ ಪಕ್ಕದ ಮೂಲೆಯಲಿ ಮುದುಡಿದೆ. 
ಅದರ ಪಕ್ಕದಲಿ ಮಿಣುಕುತ್ತಿರುವ ವೈಫೈ ರೌಟರ್ ನಲ್ಲಿ 
ಜೀವನೋತ್ಸಾಹ ಹೊಳೆಯುತ್ತಿದೆ. 
ನನಗದು ಬಹಳಷ್ಟು ಅಂಟಿಕೊಂಡು ಬಿಟ್ಟಿದೆ-
ಮುಖ್ಯವಾಗಿ, ನನ್ನ ಗಣಕ ಯಂತ್ರಕ್ಕೆ. 

ಅದರಿಂದ ಪ್ರೇರಿತಗೊಂಡಿದ್ದೇನೆ; ಅದನ್ನು ನಂಬಿದ್ದೇನೆ
ನಂಬಿ ಕೆಲಸ ಮಾಡುತ್ತಿದ್ದೇನೆ- ಮನೆಯಿಂದ. 
ಪಕ್ಕದ ಹೂದಾನಿಯಲ್ಲಿ ಸಿಲುಕಿರುವ
ಆ ಹೂವಲ್ಲಿ ಕಂಪಿಲ್ಲ. 

Tuesday, September 12, 2017

ಬೆಂಗಳೂರು

ಬೆಂಗಳೂರು!

ಆಫೀಸು ಎಂದರೆ ನೆನಪಾಗುವ ಟ್ರಾಫಿಕ್ಕು ಜಾಮುಗಳು, ಡೆಡ್ ಲೈನುಗಳು. 
ಗಣೇಶೋತ್ಸವ ಎಂದರೆ ನೆನಪಾಗುವ ಹರಕು ಮೈಕುಗಳು, ಹೆಸರೇ ಇಲ್ಲದ ಚಂದಾ ಕಲೆಕ್ಷನ್ ರಶೀದಿಗಳು. 
ರಾತ್ರಿ ಹತ್ತರ ಸಣ್ಣ walkಗೆ ಉಪದ್ರ ಕೊಡುವ ಬೀದಿ ನಾಯಿಗಳು. 
ತನ್ನಿಂತಾನೇ connect ಆಗುವ ಮನೆ-ಆಫೀಸು ವೈಫೈಗಳು. 
ಶನಿವಾರ ಆದಿತ್ಯವಾರಗಳನ್ನು ಚಿಕ್ಕದಾಗಿಸುವ ವೀಕೆಂಡ್ ಎಂಬ ಹೆಸರು. 

Sunday, April 9, 2017

ನನ್ನ ನೆಚ್ಚಿನ ಪುಷ್ಪಾವತಿ ಮೇಡಂಗೊಂದು ಅಕ್ಷರ ನಮನ

"ಏನು ಮಧುಸೂದನ, ಪಾಠ ಮಾಡಿದ್ದು ಅರ್ಥ ಆಯಿತೋ ಇಲ್ಲ್ವೋ ?"- ಅಂತ ನನ್ನ ನೆಚ್ಚಿನ ವಿಜ್ಞಾನ ಶಿಕ್ಷಕಿ ಪುಷ್ಪಾವತಿ ಮೇಡಂ ಹೇಳಿದ್ದು ಇನ್ನೂ ನನ್ನ ಕಿವಿಗೆ ಕೇಳುತ್ತಾ ಇದೆ. ಮೊನ್ನೆ ನಾನು ಆಫೀಸಿನಲ್ಲಿ ಇದ್ದಾಗ ನನ್ನ ಅಮ್ಮ ಫೋನ್ ಕರೆಮಾಡಿ 'ಪುಷ್ಪಾವತಿ ಮೇಡಂ ಇನ್ನಿಲ್ಲ' ಅಂದಾಗ ನನಗೆ ನಂಬಲಾಗಲಿಲ್ಲ. ಗದ್ಗದಿತನಾದೆ. ಪಕ್ಕದಲ್ಲೇ ಇದ್ದ ಮೀಟಿಂಗ್ ರೂಮಿಗೆ ಹೊಕ್ಕು ಬಾಗಿಲು ಹಾಕಿಕೊಂಡು, ಒತ್ತಿ ಬರುತ್ತಿದ್ದ ಅಳುವನ್ನು ತಡೆಯಲು ಯತ್ನಿಸಿದೆ. 'ಇಲ್ಲ, ಸಾಧ್ಯವೇ ಇಲ್ಲ; ನನ್ನ ಅತ್ಯಂತ ನೆಚ್ಚಿನ ಮೇಡಂ ಇನ್ನೂ ಇದ್ದಾರೆ'- ಅನ್ನುತ್ತಿತ್ತು ನನ್ನ ಮನಸ್ಸು.
******
ಪುಷ್ಪಾವತಿ ಮೇಡಂ. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೇವರಿಟ್ ಟೀಚರ್. ನಾನು ಓದುತ್ತಿದ್ದ ಸಮಯದಲ್ಲಿ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಪಾಠ ಮಾಡುತ್ತಿದ್ದವರಲ್ಲಿ ಒಬ್ಬರು.  ವಿದ್ಯಾರ್ಥಿಗಳ ಸಂಪೂರ್ಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡವರು. ಯೋಚನಾ ಸ್ಪಷ್ಟತೆ, ಅದ್ಭುತ ವಾಕ್ಪಟುತ್ವ, ಭಾಷಾ ಪ್ರೌಢಿಮೆ, ವಿಜ್ಞಾನದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸುವ ಪರಿ, ಅಚಲ ಆತ್ಮ ವಿಶ್ವಾಸ, ಮುಖದಲ್ಲಿ ಸದಾ ಮುಗುಳ್ನಗೆ, ಕೈಯಲ್ಲೊಂದು ಚಾಕ್ ಪೀಸ್, ಕತ್ತೆತ್ತಿ ಕೊನೆಯ ಬೆಂಚಿನವರನ್ನು ಸೂಕ್ಷ್ಮವಾಗಿ ಗಮನಿಸುವ ಪರಿ, ಗಂಧಕ-ರಂಜಕಗಳ ಸಮೀಕರಣವನ್ನು ಮನರಂಜಕವಾಗಿ ಪೂರ್ಣಗೊಳಿಸುವ ನೈಪುಣ್ಯ,... ಅಬ್ಬಾ, ಪುಷ್ಪಾವತಿ ಮೇಡಂಗೆ ಪುಷ್ಪಾವತಿ ಮೇಡಂ ಮಾತ್ರ ಸಾಟಿ. ಮೇಡಂ ಪಾಠ ಅರ್ಥ ಆಗ್ತಾ ಇಲ್ಲ ಎಂದು ಇಲ್ಲಿಯವರೆಗೆ ಅಂದವರೇ ಇಲ್ಲವೇನೋ.
ಹೈಸ್ಕೂಲ್ ಸೇರುವ ಹೊತ್ತಿಗೆ, 'ಮುಂದೆ ಪಿ ಯು ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡು ಸಾಹಿತ್ಯ ಸಂಶೋಧನೆ ಮಾಡಬೇಕು' ಎಂದುಕೊಂಡಿದ್ದ ನಾನು ಮುಂದೆ ವಿಜ್ಞಾನ ವಿದ್ಯಾರ್ಥಿಯಾಗುವಂತೆ ಮಾಡಿ, ನನ್ನ ಮುಂದಿನ ಜೀವನದ ಯಶಸ್ಸಿಗೆ ಮುಖ್ಯ ಕಾರಣ ಪುಷ್ಪವತಿ ಮೇಡಂ.
*****






*****
ನಾನು ಎಂಟನೇ ತರಗತಿಯಲ್ಲಿರುವಾಗ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಪುಷ್ಪಾವತಿ ಮೇಡಂ ತಯಾರಿ ಮಾಡಿದ ಪೇಪರ್  'ಜೈವಿಕ ತಂತ್ರಜ್ಞಾನ'ದ ಮೇಲಿತ್ತು. (ಅಲ್ಲಿಯವರೆಗೆ ಬರೀ ಭಾಷಣ ಮಾತ್ರ ಮಾಡುತ್ತಿದ್ದೆ). ಗೋಷ್ಠಿಯಲ್ಲಿ ನನ್ನ 'paper presentation' ಮುಗಿದು ಕೊನೆಗೆ ತೀರ್ಪುಗಾರರು viva ಪ್ರಶ್ನೆಗಳನ್ನು ಕೇಳಿದಾಗ ಪೆಚ್ಚಾಗಿ ಪುಷ್ಪಾವತಿ ಮೇಡಂ ಮುಖವನ್ನು ನೋಡುತ್ತಿದ್ದೆ. ನನ್ನ ಕೆಟ್ಟ ಪ್ರದರ್ಶನದಿಂದ ಬೇಸರಗೊಂಡಿದ್ದರು ಮೇಡಂ. ಮಂಗಳೂರಿನಿಂದ ಉಪ್ಪಿನಂಗಡಿವರೆಗಿನ ಬಸ್ಸು ಪ್ರಯಾಣದಲ್ಲಿ ಪೂರ್ತಿ ಕ್ಲಾಸ್ ತೆಗೆದುಕೊಂಡಿದ್ದರು. ಮುಂದಿನ ವರುಷದ ವಿಚಾರ ಸಂಕಿರಣದಲ್ಲಿ ನನ್ನ ವಿಚಾರ ಮಂಡನೆಯನ್ನು ಕಂಡು ತುಂಬಾ ಖುಷಿ ಪಟ್ಟಿದ್ದರು. ಪಾಠದ ಜೊತೆಗೆ ವಿಜ್ಞಾನ - ಸಾಹಿತ್ಯಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹಿಸುತ್ತಿದ್ದರು ಪುಷ್ಪಾವತಿ ಮೇಡಂ. ಅಂತರ್-ಶಾಲಾ ಸ್ಪರ್ಧಾ ಚಟುವಟಿಗೆಗಳು, ವಿಜ್ಞಾನ ಪ್ರಯೋಗ - ಪ್ರದರ್ಶನಗಳು ಪುತ್ತೂರಿನಲ್ಲಿ ನಡೆಯುತ್ತಿದ್ದಾಗ ನಾನೂ ಕೆಲವು ಬಾರಿ ಅವರ ಮನೆಯಲ್ಲಿ ಚಹಾ ತಿಂಡಿ ಮಾಡಿ 'rehearsal' ಮಾಡಿದ್ದೂ ಇದೆ.
*****
ಪುಷ್ಪಾವತಿ ಮೇಡಂ ಪಾಠದ ಹಲವು ಸಾಲುಗಳು ನನ್ನ ಮನದಲ್ಲಿ ಇಂದಿಗೂ ಅಚ್ಚಾಗಿವೆ. ವಿಜ್ಞಾನದ ಸಾಲುಗಳನ್ನು ಮನದಲ್ಲಿ ಎಂದಿಗೂ ಅಳಿಯದಂತೆ ಅಚ್ಚು ಹಾಕುವುದು ಸುಲಭದ ಮಾತಲ್ಲ. 'ರಾಸಾಯನಿಕ ಕ್ರಿಯಾವರ್ಧಕಗಳು' (catalysts) ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುತ್ತಾ, "ನಾವು ಶಿಕ್ಷಕರಾಗಿ ನಿಮ್ಮ ವಿದ್ಯಾರ್ಜನೆಯ ವೇಗವನ್ನು ಹೆಚ್ಚಿಸಬಹುದಷ್ಟೇ. ಪರೀಕ್ಷೆ ಬರೆಯುವುದು ನಿಮ್ಮ ಸ್ವಂತ ಬುದ್ಧಿವಂತಿಕೆಯಲ್ಲಿ. ನಾವು ಕ್ರಿಯಾವರ್ಧಕಗಳು; ಅಷ್ಟೇ" ಅಂದಿದ್ದರು. ಜೀವಶಾಸ್ತ್ರ , ರಸಾಯನ ಶಾಸ್ತ್ರಗಳ ಮೂಲ ಅಂಶಗಳನ್ನು, ಹಲವು 'definition'ಗಳ ವಿಶೇಷತೆಯನ್ನು ಒಗಟುಗಳ ಮೂಲಕ ವಿವರಿಸುತ್ತಿದ್ದರು.
ನಾನು ತೀರಾ ಇತ್ತೀಚಿಗೆ ನನ್ನ ಶಾಲೆಗೆ ಭೇಟಿ ಕೊಟ್ಟಿದ್ದೆ. ಬೆಂಗಳೂರಿನಲ್ಲಿ ನಾನು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಉತ್ಸಾಹದಿಂದ ಮೇಡಂ ಜೊತೆಗೆ ಮಾತನಾಡಿದ್ದೆ. ಐಟಿ ಕ್ಷೇತ್ರದ ಬೆಳವಣಿಗೆಗಳನ್ನು ವಿವರಿಸುತ್ತಿದ್ದೆ, ನನಗೆ ತಿಳಿದ ಮಟ್ಟಿಗೆ. ಆ ದಿನ ಸಂಜೆ ವೇಳೆಗೆ ಪುಷ್ಪಾವತಿ ಮೇಡಂರ ದೂರವಾಣಿ ಕರೆ ನನಗೆ ಬಂದಿತ್ತು. "ಮಧುಸೂದನ, ಆ Network Elements ಅಂದ್ಯಲ್ಲ, ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಿ? ಸ್ವಲ್ಪ ಹೇಳ್ತೀಯ?" ಎಂದು ಕೇಳಿದ್ದರು. ಮೇಡಂ ಅಂದರೆ ಹಾಗೆ. 'ಕಲಿಯುವುದು ಎಲ್ಲರಿಂದಲೂ ಇದೆ' ಎಂದಿದ್ದರು.
*****

ನನ್ನ ನೆಚ್ಚಿನ ಪುಷ್ಪಾವತಿ ಮೇಡಂ,

ಹತ್ತನೇ ತರಗತಿಯಲ್ಲಿ ಪಾಠ ಮಾಡುತ್ತಾ ಒಂದು ಸಾರಿ ನೀವು "ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಅಮೆರಿಕನ್ನರಿಗಿಂತ ಇಪ್ಪತ್ತೈದು ವರುಷ ಹಿಂದೆ ಇದ್ದೇವೆ" ಅಂದಿದ್ದಿರಿ. ಮೊನ್ನೆ ಮಾತನಾಡಿದಾಗ 'ನಾವು ಕಲಿಯುವುದು ಬಹಳಷ್ಟಿದೆ' ಅಂದಿದ್ದಿರಿ. ನಿಮ್ಮಿಂದ ಕಲಿತುಕೊಳ್ಳುವುದು ಬಹಳಷ್ಟಿತ್ತು.
ಸದಾ ನಗುಮೊಗದಿಂದ ಸಮೀಕರಿಸುತ್ತಿದ್ದ ನಿಮ್ಮ ಸಮೀಕರಣಗಳು ಅರ್ಧದಲ್ಲಿ ಉಳಿದಿವೆ. ಹಲವು ಒಗಟುಗಳು ಉತ್ತರವಿಲ್ಲದೆ ಉಳಿದಿವೆ. ಡಾರ್ವಿನ್ನನ ಸಿದ್ಧಾಂತಗಳ ಬಗೆಗಿನ ನಿಮ್ಮ ಅದ್ಭುತ ಕತೆಗಳನ್ನು ಇನ್ನೂ ಕೇಳಬೇಕೆನಿಸಿದೆ.
ನೀವ್ಯಾಕೆ ಮೇಡಂ ಇಷ್ಟು ಬೇಗ ಪಾಠ ನಿಲ್ಲಿಸಿದಿರಿ?
****

Sunday, November 1, 2015

ಕಾಳು ಮತ್ತು ಟೈಗರ್!

ಆ ದಿನ ಪದ್ಮುಂಜದ ನನ್ನ ಮನೆಯಿಂದ ಬಸ್ಸಿಗಾಗಿ ಹೊರಡುವಾಗ ಸ್ವಲ್ಪ ತಡವಾಗಿತ್ತು. ಸಿಗುತ್ತದೋ ಇಲ್ಲವೋ ಎಂಬ ತರಾತುರಿಯಲ್ಲೇ ಧಡಬಡನೆ ಮನೆಯಿಂದ ಕಾಲ್ಕಿತ್ತೆ. ಐದು ನಿಮಿಷ ಬಸ್ಸಿನ ಮಾರ್ಗದ ಬಳಿಗೆ ಓಡಿದವನು ನಿಂತದ್ದು ಬಸ್ಸಿನ ಒಳಗಡೆಯೇ. "ಎಂತದು ಬಟ್ರೆ, ಇವತ್ತು ಎದ್ದದ್ದು ತಡವಯ್ತಾ" ಎಂದು ಕಂಡಕ್ಟರ್ ಕೇಳಿದ. 'ಹೌದು' ಎಂದು ಚೂರು ಸುಧಾರಿಸಿಕೊಂಡು ಅಮ್ಮನಿಗೆ ಫೋನ್ ಮಾಡಿದೆ- "ಬಸ್ಸು ಸಿಕ್ಕಿತು" ಎಂದೆ. "ಗೊತ್ತಾಯ್ತು,ಟೈಗರ್ ವಾಪಸ್ ಬಂದ" ಎಂದರು ಅಮ್ಮ.
ಈ ನಮ್ಮ ನಾಯಿ ಟೈಗರ್ ವಾಪಸ್ ಮನೆಗೆ ಬಂದರೆ ಅಲ್ಲಿ ಬಸ್ಸು ಸಿಕ್ಕಿತೆಂದೇ ಅರ್ಥ. ಅಮ್ಮನಿಗೆ ಭಾರೀ ವಿಶ್ವಾಸ ಈ ನಾಯಿಯ ಬಗ್ಗೆ. ಅದು ನೂರು ಪ್ರತಿಶತ ಸತ್ಯ ಸಹ.
*****
ಟೈಗರ್. ನಮ್ಮ ಮನೆಯ ಸ್ಮಾರ್ಟ್ ಸಾಕು ಪ್ರಾಣಿ ನಾಯಿ. ಸಾವಿರದ ಒಂಭೈನೂರ ತೊಂಭತ್ತಾರರಲ್ಲಿ ಅಮ್ಮ ಅದನ್ನು ಬೆಳಾಲಿನ ನನ್ನ ಅಜ್ಜಿ ಮನೆಯಿಂದ ಚೀಲದಲ್ಲಿ ಹೊತ್ತು ತಂದಿದ್ದರು. ಮನೆಯ ಜಗಲಿಯಲ್ಲಿ ಕಾದು ನಿಂತಿದ್ದ ನನ್ನನು ತಂಗೀಸು ಚೀಲದ ಸಂದಿನಿಂದಲೇ ಮುಖ ಮಾತ್ರ ಹೊರಗೆ ಹಾಕಿ ಇಣುಕಿ ನೋಡಿದ್ದು- ನಾನು ಅವನನ್ನು ನೋಡಿದ ಮೊದಲ ನೆನಪು. ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಕೆಂಪು-ಹಳದಿ-ಬಿಳಿ ಮಿಶ್ರಿತ ಬಣ್ಣದ ಪುಟ್ಟ ಮರಿ. 'ಟೈಗರ್' ಎಂಬ ಹೆಸರು ಆ ಕ್ಷಣಕ್ಕೆ ನನ್ನ ಮತ್ತು ನನ್ನ ಅಕ್ಕನ ತಲೆಗೆ ಹೊಳೆದದ್ದು. ಎಲ್ಲರ ಒಪ್ಪಿಗೆಯೂ ಸಿಕ್ಕಿತ್ತು, ಕ್ಷಣ ಮಾತ್ರದಲ್ಲಿ ನಾಮಕರಣವಾಯಿತು. ಮುಂದಿನದ್ದು ಟೈಗರ್ ಮತ್ತು ನಮ್ಮ ಕುಟುಂಬದ ಸದಸ್ಯರ ನಡುವಿನ ಮಧುರವಾದ ಪ್ರೇಮ ಕಥೆ.
*****
ನಾಯಿ, ಬೆಕ್ಕುಗಳೆಂದರೆ ಅಪ್ಪನಿಗೂ ಪ್ರೀತಿ. (ಆದರೆ ಅಪ್ಪ ಕೋಪದಲ್ಲಿದ್ದ ಸಂದರ್ಭದಲ್ಲಿ ರೇಗಿ ಬಿಡುತ್ತಿದ್ದರು). ನಮ್ಮ ಮನೆಯ ಬೆಕ್ಕುಗಳನ್ನು ನಾಯಿಗಳೊಂದಿಗೆ ದೋಸ್ತಿ ಮಾಡಿಸುತ್ತಿದ್ದರು. "ನೀವು ನಾಯಿಯನ್ನು ಬೆಕ್ಕಿನ ತರಹ ಸಾಕುತ್ತಿದ್ದೀರಿ" ಎಂದು ಅಮ್ಮ ಒಮ್ಮೊಮ್ಮೆ ಅಪ್ಪನಿಗೆ ಹೇಳಿದ್ದೂ ಉಂಟು.
ಟೈಗರ್ ನಮ್ಮ ಮನೆಗೆ ಬರುವುದಕ್ಕೂ ಮೊದಲು 'ಕಾಳು' ಎಂಬ ಹೆಸರಿನ ಕರಿನಾಯಿ ಒಂದಿತ್ತು. ಪಾಪದ ನಾಯಿ. ಟೈಗರ್ ಬಂದ ದಿನಗಳಲ್ಲಿ ಆದರೆ ಮೇಲೆ ಸುಖಾ ಸುಮ್ಮನೆ ragging ಮಾಡುತ್ತಿತ್ತು ಕಾಳು. ಅಮ್ಮ ಹತ್ತಿರದ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಅಮ್ಮ ಅಂದರೆ ಕಾಳುವಿಗೆ ಭಾರೀ ಇಷ್ಟ . ರಾತ್ರಿ ನಾಯಿಗಳನ್ನು ಕಟ್ಟದೆ ಬಿಡುತ್ತಿದ್ದೆವು. ಕೆಲವೊಂದು ದಿವಸ ಅಮ್ಮ ಶಾಲೆಗೆ ಹೊರಡುವ ವೇಳೆಗೆ ಕಾಳು ಸಹ ಹೊರಟು ನಿಲ್ಲುತ್ತಿತ್ತು. ಕಟ್ಟಲು ಹೋದರೆ ತಪ್ಪಿಸಿಕೊಳ್ಳುತ್ತಿತ್ತು. ಶಾಲೆಯ ಆಫೀಸು ರೂಮಿನ ಹೊರಗೆ ಸಂಜೆಯವರೆಗೆ ಮಲಗುತ್ತಿತ್ತು. ಹೆಡ್ ಮಾಷ್ಟರ್ ಮನೆಯ ನಾಯಿ ಎಂದು ಶಾಲಾ ಮಕ್ಕಳೂ ಸಹ ನಾಯಿಯನ್ನು ಮುದ್ದಿಸುತ್ತಿದರು. ಒಂದು ಮಳೆಗಾಲದಲ್ಲಿ ಜೋರಾಗಿ ಮಳೆ ಬರುತ್ತಿರುವಾಗ ಅಮ್ಮನ ಆಫೀಸು ಕೋಣೆಯ ಒಳಗೂ ನುಗ್ಗಲು ಇಣುಕುತ್ತಿದ್ದ ಕಾಳುವನ್ನು ಕಂಡು ಅಮ್ಮ ಪೇಚಿಗೆ ಸಿಕ್ಕಿದ್ದರು. ಆ ದಿನ ಇನ್ಸ್ಪೆಕರ್ ಸಾಹೇಬರೂ ಶಾಲೆಗೆ ಬಂದಿದ್ದರಂತೆ!
ಬರ ಬರುತ್ತಾ ಕಾಳು ಮತ್ತು ಟೈಗರ್ ಸ್ನೇಹಿತರಾದರು. ತೋಟದ ಬಾಳೆ, ಏಳನೀರುಗಳನ್ನು ಕದಿಯಲು ಬರುತ್ತಿದ್ದ ಮಂಗಗಳನ್ನು ಓಡಿಸುವುದರಲ್ಲಿ, ಪಕ್ಕದ ಮನೆಯವರು ಸಮಯ ನೋಡಿ ನಮ್ಮ ತೋಟಕ್ಕೆ ಬಿಡುತ್ತಿದ್ದ ದನಗಳನ್ನು ಓಡಿಸುವುದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದರು. ಅಮ್ಮ ದೇವರ ಕೋಣೆಯಲ್ಲಿ ಶಂಖ ಓದಿದಾಗ ತಾವೂ 'ಊ~ ಊ~ ಊ'  ಎಂದು ಸ್ಪರ್ಧೆಯಲ್ಲಿ ಅರಚುತ್ತಿದ್ದುದನ್ನು ಮಾತ್ರ ಸಹಿಸಲಾಗುತ್ತಿರಲಿಲ್ಲ.
ಈ ನಾಯಿಗಳಿಗೆ ನಮ್ಮ ಜಾಗದ ಗಡಿ ನಿಖರವಾಗಿ ಗೊತ್ತಿತ್ತು ಅನ್ನಿಸುತ್ತದೆ. ಅದರ ಹೊರಗಡೆ ಇವು walk, jog ಹಾಗೂ 'ಇನ್ನಿತರ' ಕೆಲಸಗಳಿಗೆ ಹೋಗಿ ಬರುತ್ತಿದ್ದವಾದರೂ ಹೊರಗಡೆ ಹೋಗಿ ಸಾರ್ವಜನಿಕರಿಗೆ ಬೊಗಳಿದ್ದು, ಕಚ್ಚಿದ್ದು ಇಲ್ಲವೇ ಇಲ್ಲ.
*****

ಒಂದು ದಿನ ಬೆಳ್ಳಂಬೆಳಗೆ ಟೈಗರ್ ಕುಯ್-ಕುಯ್-ಕುಯ್ ಎಂದು ಜೋರಾಗಿ ಅರಚುತ್ತಾ ಬಂತು. ನೋಡಿದರೆ ಕಣ್ಣಿನ ಬಳಿ ಮುಖದ ಒಳಗೆ ಹೊಕ್ಕಿದ್ದ ಎರಡು ಮುಳ್ಳುಗಳು. ಮುಳ್ಳು ಹಂದಿಯ ಮುಳ್ಳುಗಳು! ಕಾಳು ಕೂಡ ಬೊಗಳಿಕೊಂಡು ಬಂದ; ಅವನಿಗೇನೂ ಆಗಿರಲಿಲ್ಲ. ಈ ನಾಯಿಗಳು ಹೊರಗಿನ ಇತರ ಹಲವುಕೆಲವು ನಾಯಿಗಳ ಸಹಯೋಗದೊಂದಿಗೆ, ನಮ್ಮ ಗೇರು ಬೀಜದ ಮರವೊಂದರ ಅಡಿಯಲ್ಲಿ ಮುಳ್ಳು ಹಂದಿಯೊಂದನ್ನು ಕೊಂದು ಹಾಕಿದ್ದವು. ಗೊಳೋ ಎಂದು ಅಳುತ್ತಿದ್ದ ಟೈಗರ್ ಮುಖವನ್ನು ಬಿಗಿ ಹಿಡಿದು, ಅಪ್ಪಯ್ಯ ಆ ಮುಳ್ಳುಗಳನ್ನು ಎಳೆದು ಹೊರ ತೆಗೆದಿದ್ದರು. ಟೈಗರ್ ನಿರಾಳವಾಗಿದ್ದ. ಸುದ್ದಿ ಊರೆಲ್ಲ ಹಬ್ಬಿ ಜನ ಬಂದು ಸೇರಿ ಆ ಸತ್ತ ಮುಳ್ಳು ಹಂದಿಗೂ ಸರಿಯಾಗಿ ವೈಕುಂಠದ ದಾರಿ ತೋರಿಸಿದ್ದರು.
ನನ್ನ ಪಾಲಿಗಂತೂ ಟೈಗರ್ ಹೀರೋ ಆಗಿದ್ದ!

ಸಾವಿರದ ಒಂಭೈನೂರ ತೊಂಭತ್ತೆಂಟು. ಕಾಳು ಅಜ್ಜ ಆಗುತ್ತಿದ್ದ. ಕೊನೆ ಕ್ಷಣಗಳನ್ನು ಎಣಿಸುತ್ತಿದ್ದ. ಆತನ ಮೂರು ಹೊತ್ತಿನ ಊಟವನ್ನೂ ಅಮ್ಮ ಸರಿಯಾಗಿ ನುಜ್ಜಿ ಪುಡಿಮಾಡಿ, ಮೆದುಮಾಡಿ ಕೊಡುತ್ತಿದ್ದರು. ಹಲ್ಲಿಲ್ಲದ ಕಾಳುವಿಗೆ ಕೂಳು ತಿನ್ನುವುದು ಕಷ್ಟವಾಗುತ್ತಿತ್ತು. ಆಗಿನ್ನೂ ಮೂರು-ಮೂರೂವರೆ ವರ್ಷದ ಟೈಗರ್ ಕೂಡ, ತನ್ನ ಜೊತೆ ಆಡಲು, ಒಡಲು ಕಾಳು ಬರುತ್ತಿಲ್ಲ ಎಂದು ಬೇಸರಗೊಳ್ಳುತ್ತಿದ್ದ. ಒಂದು ದಿವಸ, ಹೆಚ್ಚು ನರಳದೆ ಕಾಳು ಸತ್ತ. ಬೇಸರದಿಂದ ಅವನನ್ನು ಮಣ್ಣು ಮಾಡಿದ್ದೆವು.
ಕಾಳು ಸತ್ತ ಆ ವಾರ ಊಟ ಬಿಟ್ಟಿದ್ದ ಟೈಗರ್.
*****
ಕೆಲವು ದಿನ ಅಂತರ್ಮುಖಿಯಾಗಿದ್ದ ಟೈಗರ್ ನಿಧಾನವಾಗಿ ಚೇತರಿಸಿಕೊಂಡ. ಮಂಗ, ದನ ಓಡಿಸುವ ವಿಷಯದಲ್ಲಿ ಏಕಾಂಗಿಯಾಗಿ ಹೋರಾಡಲಾರಂಭಿಸಿ ಯಶಸ್ವಿಯಾಗತೊಡಗಿದ. ಹಂದಿ ಮುಳ್ಳಿನ ಗುರುತು ಈಗ ಮುಖದಲ್ಲಿ ಮಚ್ಚೆಯ ತರಹ ಕಾಣುತ್ತಿತ್ತು. "ಬಟ್ರೆನ ಇಲ್ಲಡೆಡ್ ಕಪ್ಪು ಮಚ್ಚೆದ ಒಂಜಿ ನಾಯಿ ಉಂಡು. ಕಟ್ಟುದೆರಾ ಕೇಂಡ್ದು ಪೋಲೆ" (ಭಟ್ಟರ ಮನೆಯಲ್ಲಿ ಕಪ್ಪು ಮಚ್ಚೆಯ ನಾಯಿ ಉಂಟು. ಕಟ್ಟಿದ್ದಾರಾ ಅಂತ ವಿಚಾರಿಸಿ ಹೋಗಿ) ಅಂತ ಹೊಸದಾಗಿ ಬಂದು ಮನೆಗೆ ದಾರಿ ಕೇಳಿದವರಿಗೆ ನೆರೆಕರೆಯವರು ಎಚ್ಚರಿಸುತ್ತಿದರಂತೆ. ನಾಯಿಯ ಬಗ್ಗೆ ಸ್ವಲ್ಪ ಹೆದರಿಕೆ ಇದ್ದರೆ ಒಳ್ಳೆಯದು ಎಂದು ಅಪ್ಪ ಹೇಳುತ್ತಿದ್ದರು.
*****
ನಾನು ಪಿ.ಯು.ಸಿ ಮುಗಿಸುವ ಹೊತ್ತಿಗೆ ಟೈಗರ್ ಮುದುಕನಾಗಿದ್ದ. ಇಪ್ಪತ್ತು ವರುಷಗಳ ಯುವ ಜೀವನದ ಬಳಿಕ. ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದೆನಷ್ಟೇ. "ಟೈಗರ್ ಆಗಾಗ ಸುಮ್ಮನೆ, ವಿಷಯವಿಲ್ಲದೇ ಕುಯ್ ಅನ್ನುತ್ತದೆ" ಎಂದು ಅಮ್ಮ ಅನ್ನುತ್ತಿದ್ದರು. ಅಕ್ಕ ಮನೆ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯ ಸೇರಿಕೊಂಡಾಗಲೂ "ಯಾರೋ ಮನೆಯಲ್ಲಿಲ್ಲ" ಎಂದು ಬೇಸರಗೊಂಡಿತ್ತಂತೆ. ತಿಂಗಳಿಗೊಂದು ಸಾರಿ ನಾನು ಮನೆಗೆ ಹೋದಾಗಲಂತೂ, ಟೈಗರ್ ಎರಡೂ ಕೈಗಳನ್ನು ಎತ್ತಿ ಸಂತಸ ಪಡುತ್ತಿತ್ತು. ನೆಕ್ಕಿ ಮುದ್ದಿಸಲು ಬರುತ್ತಿತ್ತು.
ಟೈಗರ್ ಇನ್ನು ಹೆಚ್ಚು ದಿವಸ ಬದುಕಲಾರದು ಎಂದು ಅಪ್ಪ ಒಂದುದಿನ ಫೋನ್ ಮಾಡಿ ಹೇಳಿದರು. ತುಂಬಾ ಬೇಸರಗೊಂಡೆ. ಆದರೆ ಅದಕ್ಕೂ ಹೆಚ್ಚು ಬೇಸರವಾದದ್ದು ಅದು ಅಸುನೀಗಿದ ರೀತಿ. ಜೋರು ಮಳೆ ಬರುತ್ತಿದ್ದ ಒಂದು ದಿವಸ, ಅಪ್ಪನೂ ಅಮ್ಮನೂ ಮನೆಯಲ್ಲಿರದ ಆ ದಿವಸ- ಕೆಲ ದಿನಗಳಿಂದ ಟೈಗರ್ ನನ್ನು ಕಟ್ಟದೇ ಬಿಟ್ಟಿದ್ದರಂತೆ- ಅಪ್ಪ ಪೇಟೆಯಿಂದ ವಾಪಸ್ ಬರುವಷ್ಟರಲ್ಲಿ ಮನೆಯ ಮಾಡಿನ ಧಾರೆ ನೀರು ಬೀಳುವ ಜಾಗದಲ್ಲಿ ಮಲಗಿ ಬಿದ್ದಿತ್ತಂತೆ. ಸಾಯುವ ಕ್ಷಣ ಯಾರೂ ಇರಲಿಲ್ಲ ಎಂದು ಅಪ್ಪನೂ ಅಮ್ಮನೂ ಮರುಗಿದರು.
ನಾನು ಕೆಲ ದಿನಗಳ ಬಳಿಕ ಮೈಸೂರಿಂದ ರಾತ್ರಿ ಬಸ್ ಏರಿ, ಮನೆಗೆ ಬರುವಾಗ ಸ್ವಾಗತಿಸಲು ಬರದ ನಾಯಿಯನ್ನು ನೆನೆದು ಒಂದು ಕ್ಷಣಕ್ಕೆ ಕಣ್ಣುಗಳು ತೇವವಾದವು. ನಿಧಾನಕ್ಕೆ ಸುಧಾರಿಸಿಕೊಂಡೆ.
ಅಂದ ಹಾಗೆ, ಈ ಕಾಳು ಮತ್ತು ಟೈಗರ್ ಎರಡೂ ಸಾಮಾನ್ಯ ತಳಿಯ ನಾಯಿಗಳು.ಸಾಮಾನ್ಯ ಭಾಷೆಯಲ್ಲಿ-ಕಾಟು ನಾಯಿಗಳು.  ಹೈಬ್ರೀಡ್ ಜಾತಿ ನಾಯಿಯಂತೆ ಇದ್ದ ಇವುಗಳ ಪ್ರೀತಿ, ಪ್ರಾಮಾಣಿಕತೆ, ಧೈರ್ಯ, ಬುದ್ಧಿವಂತಿಕೆ- ಅವನ್ನು ಮನಸ್ಸಿಗೆ ಹತ್ತಿರ ಮಾಡಿದ್ದವು.
*****
ಸದ್ಯಕ್ಕೆ ಮತ್ತೊಂದು ನಾಯಿಯಿದೆ. ರೂಬಿ. ಇರಲಿ, ಮುಂದೆ ಬರೆಯೋಣ!
*****

Sunday, July 27, 2014

ಪುತ್ತೂರಿನಲ್ಲಿ ಗಾಂಧೀಜಿ

ಇಸವಿ ಸಾವಿರದ ಒಂಭೈನೂರ ಇಪ್ಪತ್ತೇಳು ಇರಬೇಕು. ಪುತ್ತೂರಿನಿಂದ ಐದಾರು ಮೈಲಿ ದೂರದ ಮೇರಳ ಎಂಬ ಪುಟ್ಟ ಹಳ್ಳಿಯಲ್ಲಿ ನಾರಾಯಣ ಭಟ್ಟರ ವಾಸ.  ಭಟ್ಟರು ವರುಷಕ್ಕೆ ಹನ್ನೆರಡು ಸಾವಿರ ಆದಾಯ ಹೊಂದಿದ್ದವರು. ಆಗಿನ ಕಾಲದ ಶ್ರೀಮಂತ ಕೃಷಿಕರಲ್ಲಿ ಒಬ್ಬರಾಗಿದ್ದರು. ಅವರು ಸ್ವತಃ ಬೆವರಿಳಿಸಿ ದುಡಿದು ಬಾಳುವ ಪರಿಶ್ರಮಿ.
ನಿನ್ನೆ ರಾತ್ರಿ ತಾನೇ ಗೋಕುಲಾಷ್ಟಮಿಯಾಗಿದ್ದು, ಕೃಷ್ಣನಿಗೆ ಅರ್ಘ್ಯ ಕೊಟ್ಟು ಮಲಗುವಷ್ಟರಲ್ಲಿ ತಡವಾಗಿರಬೇಕು. ಅವರ ದೊಡ್ಡ ಮಗ ವಾಸುದೇವ ಬಿಟ್ಟರೆ ಉಳಿದವರು ಯಾರೂ ಇನ್ನೂ ಎದ್ದಿರಲ್ಲಿಲ್ಲ. ಆ ನವಮಿಯ ದಿವಸದ ನಿತ್ಯ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲೇ ಮುಗಿಸಿದ್ದರು ನಾರಾಯಣರು. ವಾಸುದೇವನ ದೈನಂದಿನ ಕೆಲಸವೆಂದರೆ ಬೆಳಗಿನ ಜಪ ಮುಗಿಸಿ, ಗಂಧ-ಚಂದನ ತೇದು ಕೊಡುವುದು. ಆಮೇಲೆ ಅಪ್ಪ ಪೂಜೆ ಮುಗಿಸುವವರೆಗೆ, ನಿನ್ನೆ ಕಲಿತಿದ್ದ ವೇದ ಮಂತ್ರಗಳನ್ನು ಮೆಲುಕು ಹಾಕುವುದು. ನಂತರ ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆಗೆ ಒಂದು ಬಾರಿ ಹೋಗಿ ಬರುವುದು. 
ಅಂದು ತೋಟದ ಕಡೆಗೆ ಹೋಗಿದ್ದ ವಾಸುದೇವ ಸ್ವಲ್ಪ ಬೇಗನೇ ತಿರುಗಿ ಬಂದ. ನಾರಾಯಣ ಭಟ್ಟರು ಆಗಲೇ ಮನೆಯ ಅಂಗಳದಲ್ಲಿ ತಟ್ಟಿ ಮಡೆಯುತ್ತಿದ್ದರು. ವಾಸುದೇವ ಮನೆಗೆ ತಿರುಗಿ ಬಂದವನೇ ಅಮ್ಮನ ಬಳಿ ಏನೋ ತವಕವನ್ನು ತೋಡಿಕೊಳ್ಳಲು ಸಮಯ ನೋಡುತ್ತಿದ್ದ. ಅಪ್ಪನ ಬಳಿ ನೇರವಾಗಿ ಹೇಳಿದರೆ ಈ ಕೆಲಸ ಸುಲಭವಾಗಿ ನೆರವೇರುವುದಿಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. 'ಅಮ್ಮ... ' ಎನ್ನುತ್ತಾ ಹಟ್ಟಿಯಲ್ಲಿ ಹಾಲು ಹಿಂಡುತಿದ್ದ ಅಮ್ಮನ ಹತ್ತಿರ ತುದಿಗಾಲಲ್ಲಿ ನಡೆಯುತ್ತಿರುವುದು ನಾರಾಯಣ ಭಟ್ಟರಿಗೆ ಕಂಡಿತು. 

"ಇಗೋ ವಾಸುದೇವ, ಬೆಳಗಿನ ಜಾವ ಹೇಳುತಿದ್ದ ಪುರುಷ ಸೂಕ್ತವನ್ನು ಮತ್ತೊಮ್ಮೆ ಹೇಳು ನೋಡೋಣ" ಎಂದರು ಭಟ್ಟರು. "ಸಹಸ್ರ ಶೀರ್ಷಃ ಪುರೂಷಃ ... " ಎಂದು ವಾಸುದೇವ ಶುರುಮಾಡುತ್ತಿದ್ದಾನಷ್ಟೇ; ತಟ್ಟಿಹೆಣೆಯುತ್ತಿದ್ದ ಭಟ್ಟರು ಕಚ್ಚೆ ಕಟ್ಟಿಕೊಂಡು ಎದ್ದು ರಪರಪನೆ ಬಂದು, "ಧರ್ ಧರ್" ಎಂದು ವಾಸುದೇವನ ಬೆನ್ನಿಗೆ ಬಾರೆ ಎಳೆದರು. "ಸ್ವರಿತ - ಅನುತತ್ತ್ವಗಳನ್ನು ಕ್ರಮಬದ್ಧವಾಗಿ ಉಚ್ಚರಿಸರಬೇಕು, ಸಹಸ್ರ ಅಲ್ಲ ಅದು ಸಹಸ್ರಾ ಅಂತ ನಿನಗೆ ಸಾವಿರ ಸಾರಿ ಹೇಳಿದರೂ ನಿಂಗೆ ಅರ್ಥ ಆಗುವುದಿಲ್ಲ. ಇನ್ನು ಪೆಟ್ಟೇ ಗತಿ ನಿಂಗೆ" ಅಂದರು. 
ಪಾಪ ವಾಸುದೇವ! ಅಮ್ಮನ ಬಳಿ ಹೇಳಬೇಕಿದ್ದ ವಿಷಯ ಈಗ ಮರೆತೇ ಹೋಗಿತ್ತು. ಅಂಗಳದ ಮೂಲೆಯಲ್ಲಿ ನಿಂತು ಮತ್ತೆ ಹತ್ತು ಬಾರಿ ಅಭ್ಯಾಸ ಮಾಡಿದ ಮೇಲೆಯೇ ಭಟ್ಟರು "ಹೂಂ, ಸಾಕು ಇವತ್ತಿಗೆ" ಅಂದಿದ್ದು.
*****

ವಾಸುದೇವನ ಸಹೋದರರೆಲ್ಲಾ ಅಷ್ಟು ಹೊತ್ತಿಗೆ ಎದ್ದಿದ್ದರು. ಬಹುಶಃ ನಾರಾಯಣ ಭಟ್ಟರ ಪೆಟ್ಟಿನ ಸದ್ದೂ, ವಾಸುದೇವನ ಅಳುವೂ ಉಳಿದವರನ್ನು ಎಬ್ಬಿಸಿರಬೇಕು. ಅಣ್ಣ ಬೆಳ್ಳಂಬೆಳಗೆ ಪೆಟ್ಟು ತಿನ್ನಿಸಿಕೊಂಡ ವಿಷಯ ಉಳಿದವರಿಗೂ ಗೊತ್ತಾಯಿತು. ಜೊತೆಗೆ ಅಪ್ಪನೂ ಭಾರೀ ಕೋಪದಲ್ಲಿ ಇದ್ದಾರೆ ಎನ್ನುವುದೂ ಅಷ್ಟೇ ಶುಭ್ರವಾಗಿತ್ತು. ನಿಜವಾಗಿ ನೋಡಿದರೆ, ಇನ್ನು ಕೆಲವೇ ದಿವಸಗಳಲ್ಲಿ ಬರಲಿರುವ ತಮ್ಮ ಎರಡನೇ ಮಗನ ಉಪನಯನದ ತಯ್ಯಾರಿ, ಇನ್ನೂ ಸಿದ್ಧವಾಗದ ತಟ್ಟಿಗಳು, ಹೀಗೆಲ್ಲಾ ಹಲವು ವಿಷಯಗಳು ತಲೆಯಲ್ಲಿರುವಾಗಲೇ ವಾಸುದೇವ ತಪ್ಪಿಸಿದ ಸ್ವರಿತ, ಭಟ್ಟರನ್ನು ಅಂಗಳದಿಂದ ಆಚೆ ಎಳೆದು ತಂದಿತ್ತು. 
ವಾಸುದೇವ ಆಗಿನ್ನೂಏಳು ವರುಷದ ಹುಡುಗ. ಆ ವರುಷದ ಮಳೆಗಾಲದಲ್ಲಿ ಜನ್ಮಾಷ್ಟಮಿಗಿಂತಲೂ ಮುಖ್ಯವಾದ ಸಂಗತಿಯೊಂದು ಪುತ್ತೂರಿನಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದದ್ದ ಗಾಂಧೀಜಿ ಪುತ್ತೂರಿಗೆ ಅಂದು ಬರುವವರಿದ್ದರು. ಚಕ್ಕುಲಿ ತಿನ್ನಲು ನಿನ್ನೆ ರಾತ್ರಿ ಮನೆಗೆ ಬಂದಿದ್ದ ಓರಗೆಯ ಹುಡುಗ ಕೃಷ್ಣಮೂರ್ತಿ ಗಾಂಧೀಜಿಯ ಬಗ್ಗೆ ತನಗೆ ಗೊತ್ತಿದ್ದ ಕತೆಗಳೆಲ್ಲವನ್ನೂ ನಿನ್ನೆಯೇ ವಾಸುದೇವನಿಗೆ ಹೇಳಿದ್ದ. ಅದನ್ನು ಕೇಳಿದ್ದ ವಾಸುದೇವ, ದ್ವಾಪರದ ಕೃಷ್ಣನಂತೆಯೇ ಗಾಂಧೀಜಿ ಇಂದಿನ ದೇವರು ಅಂದುಕೊಂಡಿದ್ದ. ಅದೂ ಅಲ್ಲದೆ, ಕೃಷ್ಣಮೂರ್ತಿಯು ಅವನ ಅಪ್ಪನ ಜೊತೆಗೆ ಮರುದಿವಸ ಪುತ್ತೂರಿಗೆ ಹೋಗಿ ಗಾಂಧೀಜಿಯನ್ನು ನೋಡುವವನಿದ್ದ. ಇದನ್ನು ತಿಳಿದ ವಾಸುದೇವನೂ ಅಪ್ಪನ ಜೊತೆಗೆ ಪೇಟೆಗೆ ಹೋಗುವ ಅಭಿಲಾಷೆ ಹೊಂದಿದ್ದ. 
ಆದರೆ, ಇವತ್ತು ಇನ್ನು ಅಪ್ಪನಿಗೆ ಹೇಗೆ ಹೇಳುವುದು? ಪೆಟ್ಟು ತಿಂದು ಹೆದರಿ ಕಂಗಾಲಾಗಿಬಿಟ್ಟಿದ್ದ ವಾಸುದೇವ. 
*****

ಹೊತ್ತು ನೆತ್ತಿಗೇರುತ್ತಿದೆ. ಗಾಂಧೀಜಿ ಆಗಲೇ ಬಂದಿದ್ದಿರಬಹುದು ಪುತ್ತೂರಿಗೆ. ಕೃಷ್ಣಮೂರ್ತಿ ಏನು ಮಾಡುತ್ತಿದ್ದನೋ ಏನೋ! ವಾಸುದೇವನಿಗೆ ಗಾಂಧೀಜಿಯ ಭಾಷಣ ಬೇಕಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಭಾರೀ ಕಿಚ್ಚೇನೂ ಪುತ್ತೂರಿಗೆ ಹತ್ತಿರಲಿಲ್ಲ. ಆದರೆ ಸ್ವಲ್ಪ ದೂರದ ಕಾಸರಗೋಡಿನ ಬಳಿ ಏನೋ ಗಲಾಟೆ ಆಗುತ್ತಿದೆ ಎಂದು ಕೆಲ ತಿಂಗಳ ಹಿಂದೆ ಎಲ್ಲೋ ಕೇಳಿದ್ದ ನೆನಪು ಅವನಿಗೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಅಂದರೆ ಏನೆಂದೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಆದರೆ ಗಾಂಧೀಜಿಯ ಹೆಸರು ಸರಿಯಾಗಿ ಗೊತ್ತಿದೆ. ಎಲ್ಲರ ಬಾಯಿಯಲ್ಲೂ ಬರುತ್ತಿದ್ದ ಹೆಸರದು. ಒಮ್ಮೆ ನೋಡಬೇಕು ಅಂದುಕೊಂಡಿದ್ದ ವಾಸುದೇವನ ಆಸೆಯ ಬಳ್ಳಿಗೆ ಕೃಷ್ಣಮೂರ್ತಿ ನೀರೆರೆದಿದ್ದ ನಿನ್ನೆ. 
"ಊಟಕ್ಕೆ ಬನ್ನಿ... "ಎಂದು ಅಮ್ಮ ಕರೆದಾಗ ಇನ್ನಾಯಿತು ಅಂದುಕೊಂಡ ವಾಸುದೇವ. 
*****

ನಾರಾಯಣ ಭಟ್ಟರ ಊಟ ಮುಗಿಯುತ್ತಿದಂತೆ ಕೃಷ್ಣಮೂರ್ತಿಯ ಅಪ್ಪ ಗಂಗಾಧರ ಭಟ್ಟರು ಮನೆಯ ಕಡೆ ಬರುತ್ತಿದ್ದರು. ಮನೆಗೆ ಬಂದು ಶಾಲನ್ನು ಕೊಡವಿ "ಅಗುರ್ರ್ ... " ಎಂದು ತೇಗಿ ತಮ್ಮ ಊಟ ಆಗಲೇ ಆಯಿತೆಂದು ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡು ಹೇಳಿದರು. ಎಲೆಯಡಿಕೆಯ ತಟ್ಟೆಯನ್ನು ಅತಿಥಿಗಳ ಎದುರಿಗಿಟ್ಟು ನಾರಾಯಣ ಭಟ್ಟರು ತಮ್ಮಕುರ್ಚಿಯ ಮೇಲೆ ಕುಳಿತರಷ್ಟೇ. ಆಗ ತಾನೇ ಊಟ ಮುಗಿಸಿ ತಟ್ಟೆ ಹಿಡಿದು ಹೊರಬಂದ ವಾಸುದೇವ "ಮಾಮ! ಗಾಂಧೀಜಿಯನ್ನು ನೋಡಿ ಆಯ್ತಾ? ಭಾರೀ ಗೌಜಿಯಾ?" ಎಂದು ಒಮ್ಮಿಂದೊಮ್ಮೆಲೇ ಕೇಳಿದ. ಕಣ್ಣು ಕೃಷ್ಣಮೂರ್ತಿ ಎಲ್ಲಿದ್ದಾನೆಂದು ಹುಡುಕುತ್ತಿತ್ತು. 
"ಇಲ್ಲ ವಾಸು. ಚಕ್ಕುಲಿ ಸರೀ ತಿಂದಿದ್ದ ಕೃಷ್ಣ ಅನಿಸ್ತದೆ. ಇವತ್ತು ಹೊಟ್ಟೆ ಸರಿ ಇಲ್ಲ ಅವನಿಗೆ. ಡಾಕ್ಟರರ ಬಳಿ ಹೋಗಿ ಬರುವಷ್ಟರಲ್ಲಿ ಹನ್ನೆರಡು ಗಂಟೆ ಆಯ್ತು. ಇನ್ನೆಂತ ಹೋಗುವುದು? ಭಾಷಣ ಮುಗ್ದಿರ್ತದೆ ಈಗ" ಅಂದರು ಗಂಗಾಧರ ಮಾವ. 

"ಗಾಂಧೀಜಿ ಬರುವುದು ಇವತ್ತಾ? ಹೌದಾ?" ಅಂದರು ಆಶ್ಚರ್ಯದಿಂದ ನಾರಾಯಣ ಭಟ್ಟರು. 
ಭಟ್ಟರಿಗೆ ರಾಜಕೀಯ, ಸ್ವಾತಂತ್ರ ಹೋರಾಟದ ವಿಷಯಗಳಲ್ಲಿ ಭಾರೀ ಆಸಕ್ತಿಯೂ ಇತ್ತು. ಕಾಸರಗೋಡಿನ ಬಳಿ ನಡೆದಿದ್ದ ಮಾಪಿಳ್ಳೆ ಕದನದಲ್ಲಿ ಸತ್ತು ಹೋದ ಅನೇಕರಲ್ಲಿ ಅವರ ಪರಿಚಯದವರೂ ಇದ್ದರು. 
ಗಾಂಧೀಜಿಯ ಜೀವನದ ಹಲವು ಕತೆಗಳನ್ನು ಊರಿನ ಹಲವು ಜನಗಳಿಗೆ ಆಗಾಗ ಇವರು ಹೇಳುತ್ತಿದ್ದರು. ವಾಸುದೇವನೂ ಇವನ್ನು ಕೇಳಿಸಿಕೊಳ್ಳುತ್ತಿದ್ದ. "ಅಪ್ಪಯ್ಯ, ಒಂದು ಸಾರಿ ಗಾಂಧೀಜಿಯನ್ನು ನೋಡ್ಲಿಕ್ಕೆ ಹೋಗುವ" ಎಂದು ಹಿಂದೊಂದು ಬಾರಿ ಹೇಳಿದ್ದ. "ಇವತ್ತು ನೀನು ಅಗ್ನಿ ಸೂಕ್ತ ಕಲಿತ್ರೆ, ಒಂದು ದಿವಸ ಗಾಂಧೀಜಿಯನ್ನು ನೋಡುವುದಕ್ಕೆ ಕರೆದುಕೊಂಡು ಹೋಗುತ್ತೇನೆ" - ಎಂದು ಅಂದು ಅಂದಿದ್ದರು ಭಟ್ಟರು. 
ಆದರೆ, ಇಂದು ಉಪನಯನದ ಕೆಲಸ, ಅಷ್ಟಮಿಯ ಚಕ್ಕುಲಿಯ ನಡುವೆ ಅದು ಹೇಗೋ ಗಾಂಧೀಜಿಯ ಆಗಮನವನ್ನು ಮರೆತಿದ್ದರು. 
ಬೈರಾಸು ಕಟ್ಟಿಕೊಂಡಿದ್ದ ವಾಸುದೇವ ಇನ್ನೂ ತಟ್ಟೆ ಕೈಯಲ್ಲಿ ಹಿಡಿದುಕೊಂಡು ಅಪ್ಪನ ಕಡೆ ಗುರ್ರೆಂದು ನೋಡುತ್ತಿದ್ದ. ಭಟ್ಟರಿಗೆ ಈಗ ಎಲ್ಲಾ ಅರ್ಥವಾಯಿತು; ಬೆಳಗಿನಿಂದ ವಾಸುದೇವನ ಮನದಲ್ಲಿದ್ದ ಕಸಿವಿಸಿಯನ್ನೂ, ಸ್ವರಿತ ತಪ್ಪಿದ್ದರ ಕಾರಣವನ್ನೂ ತಕ್ಷಣ ಅರಿತರು. 
ಸಮಯ ಮೀರುತ್ತಿದೆ ಎಂದು ಅನ್ನಿಸಿತು ಭಟ್ಟರಿಗೆ. ಆದರೂ ಒಂದು ಪ್ರಯತ್ನ ಮಾಡಿ ಬಿಡೋಣ ಎಂದು ಯೋಚಿಸಿ, "ಭಾವ, ಬನ್ನಿ ನಡಿಯಿರಿ, ಪುತ್ತೂರು ಕಡೆ ಒಮ್ಮೆ ಹೋಗಿ ಬರುವ" ಎಂದರು. 
ಇನ್ನೂ ತಟ್ಟೆ ತೊಳೆಯುತ್ತಿದ್ದ ವಾಸುದೇವನಿಗೆ, "ಅಂಗಿ ಹಾಕಿಕೋ, ಬಾ, ಹೋಗಿ ಬರುವ ಒಮ್ಮೆ" ಎಂದರು. 
*****

ಆತುರ ಆತುರದಲ್ಲೇ ವಾಸುದೇವನೂ ಹೊರಟು ನಿಂತ. ಚಾವಡಿಯಲ್ಲಿದ್ದ ಗಡಿಯಾರ ಢಣ್-ಢಣ್ ಎಂದು ಎರಡು ಬಾರಿ ಶಬ್ದ ಮಾಡಿತು. ಧಾರಾಕಾರ ಸುರಿಯುತ್ತಿದ್ದ ಆ ಮಳೆಯಲ್ಲಿ ವಾಸುದೆವನನ್ನು ಭಟ್ಟರು ಎತ್ತಿಕೊಂಡರು! ಬಹುಶಃ ತಾನೇನೂ ತಪ್ಪು ಮಾಡಿದೆ ಎಂದೆನಿಸಿ ಮಗನನ್ನು ಎತ್ತಿ ನಡೆಸುತ್ತಿದರೆನೋ!
ಗಂಗಾಧರ ಮಾವ ಹಿಂದೆ ನಡೆಯುತ್ತಿದ್ದರು. ಅಪ್ಪ ಹಾಕಿಕೊಂಡಿದ್ದ ಗೊರಬಿನ ನಡುವಿಂದ ಹಿಂದೆ ತಲೆ ಹಾಕಿ ವಾಸುದೇವ ಆಗಾಗ ಮಾವನ ಜೊತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದ. 

*****
ಮೇರಳ, ಪುತ್ತೂರಿನಿಂದ ಮಡಿಕೇರಿ ರಸ್ತೆಯ ಬದಿಯಲ್ಲಿನ ಹಳ್ಳಿ. ತಮ್ಮ ಗದ್ದೆಯ ಬದುಗಳಲ್ಲಿ ಹಾದು ಬರುತ್ತಿದ್ದಾಗ ಭಟ್ಟರಿಗೆ ಏನನ್ನಿಸಿತೋ ಏನೋ. ಭತ್ತದ ತೆನೆಯೊಂದನ್ನು ಕುಯ್ದುಕೊಂಡು ವಾಸುದೇವನ ಕೈಯಲ್ಲಿ ಕೊಟ್ಟರು. ಮಡಿಕೇರಿ ಕಡೆಯ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಮೂರು ಘಂಟೆಯಾಗಿರಬೇಕು. 
ಮಾರ್ಗದ ಎದುರುಗಡೆಯಿಂದ ಭಾರೀ ವಾದ್ಯ-ನಗಾರಿಗಳು ಕೇಳತೊಡಗಿದವು. ಎತ್ತರವಿದ್ದ ಆ ಮಾರ್ಗ ಹತ್ತುತ್ತಿದ್ದ ಭಟ್ಟರಿಗೆ ಮುಂದೆ ಏನಾಗುತ್ತಿದೆ ಎಂದು ಸ್ಪಷ್ಟವಾಗತೊಡಗಿತ್ತು. ಗಾಂಧೀಜಿ ಮುಂದೆ ಸಂಪಾಜೆ ಕಡೆ ಹೋಗುವವರಿದ್ದರು. ಅವರನ್ನು ಸುಳ್ಯ ತನಕವೂ ಮೆರವಣಿಗೆಯಲ್ಲಿ ಬಿಟ್ಟು ಕೊಡಲು ಜನ ನೆರೆದಿದ್ದರು. ತಡವಾಗಿದೆ, ಆದರೂ ಬೀಳ್ಕೊಡುಗೆಯನ್ನಾದರೂ ನೋಡುತ್ತೇನಲ್ಲಾ ಎಂದುಕೊಂಡರು ಭಟ್ಟರು. ವಾಸುದೇವ ಈಗ ಅಪ್ಪನ ಭುಜದಿಂದ ಕೆಳಗಿಳಿದಿದ್ದ. ಮಾರ್ಗದ ಬದಿಯಲ್ಲಿ ಇನ್ನೂ ಒಂದಷ್ಟು ಜನರು ಆಗ ನೆರೆದರು. ಅವರಲ್ಲಿ ಒಂದಾಗಿ ಭಟ್ಟರೂ ಸೇರಿಕೊಂಡರು. 
ಗಾಂಧೀಜಿ ಅಸ್ಪಷ್ಟದಿಂದ ಸ್ಪಷ್ಟವಾಗಿ ಕಾಣಿಸಲಾರಂಭಿಸಿದರು. ಪಲ್ಲಕ್ಕಿಯಲ್ಲಿ ಕೂತಿದ್ದ ಶ್ವೇತ ವಸ್ತ್ರದ ಗಾಂಧೀಜಿ ತಮ್ಮ ಕಣ್ಣಿನೆದುರು ಸಾಗುತ್ತಲೇ, "ಅಲ್ಲಿ ಅಲ್ಲಿ ನೋಡು ಮಗೂ, ಗಾಂಧೀಜಿ" ಎಂದು ವಾಸುದೇವನಿಗೆ ತೋರಿಸಿದರು. 
ಪಲ್ಲಕ್ಕಿ ಸರಿಯಾಗಿ ಎದುರು ಬರುತ್ತಿದಂತೆ ಭತ್ತದ ತೆನೆಯ ನಡುವೆ ಕೈಮುಗಿದ ವಾಸುದೇವ. ಮಂದಹಾಸದ ಗಾಂಧೀಜಿ ಒಮ್ಮಿಂದೊಮ್ಮೆಲೆ ಏನೋ ಪ್ರಶ್ನಾರ್ಥಕ ರೂಪದಿಂದ ವಾಸುದೇವನನ್ನು ನೋಡಿದರು. ಪಲ್ಲಕ್ಕಿ ಸ್ವಲ್ಪ ದೂರದಲ್ಲಿ ನಿಂತಿತು. ಕೆಳಗಿಳಿದ ಗಾಂಧೀಜಿ ಕೈಸನ್ನೆಯ ಮೂಲಕ ಬಾಲಕ ವಾಸುದೇವನನ್ನು ಕರೆದರು. ಭಯ ಸಂಕೋಚಗಳಿಂದ ಮುಂದೆ ನಡೆದ ಹುಡುಗ.ವಾಸುದೇವನ ಕೆನ್ನೆಯನ್ನು ಗಾಂಧೀಜಿ ಸವರಲು, ಭಟ್ಟರು ಓಡಿ ಬಂದು ಕೈಯಲ್ಲಿದ್ದ ತೆನೆಯನ್ನು ಗಾಂಧೀಜಿಗೆ ಕೊಡುವಂತೆ ಮಗನಿಗೆ ಹೇಳಿದರು. ಮುಗ್ಧ ನಗುವಿನಿಂದ ತೆನೆಯನ್ನು ಗಾಂಧಿಯ ಕೈಗಿತ್ತ ವಾಸುದೇವ. ಗಾಂಧಿಜಿ ಮುಗುಳ್ನಕ್ಕರು. 
ಪಲ್ಲಕ್ಕಿ ಮುಂದೆ ಸಾಗಿತು. 

[ಸತ್ಯ ಘಟನೆಗೆ ಅಲ್ಲಲ್ಲಿ ಸಾಂದರ್ಭಿಕ ಮಸಾಲೆ ಹಾಕಿದ್ದೇನೆ. ಗಾಂಧೀಜಿ, ಈಗಿನ ಪುತ್ತೂರು ಬಸ್ ಸ್ಟಾಂಡಿನಲ್ಲಿ ಅಂದು ಭಾಷಣ ಮಾಡಿದ್ದರಂತೆ. ಅದರ ನೆನಪಿಗಾಗಿ ಇದ್ದ ಗಾಂಧೀಜಿ ಪ್ರತಿಮೆ ಬಸ್ ಸ್ಟಾಂಡಿನ ಮೂಲೆಯ ಅಶ್ವತ್ಥ ಕಟ್ಟೆಯ ಬಳಿ ಈಗಲೂ ಇದೆ.]

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...