Sunday, June 10, 2012

ಭಾಷೆ, ಭಾಷಾಂತರ ಮತ್ತು ಅವಾಂತರ !

ನನ್ನ ಮನೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ 'ಪದ್ಮುಂಜ' ಎನ್ನುವ ಹಳ್ಳಿಯೊಂದರಲ್ಲಿ. ನನ್ನ ಅಪ್ಪ-ಅಮ್ಮ ಇಬ್ಬರೂ ಹಿಂದಿ ಭಾಷೆಯ ಪದವೀಧರರು. ಅಪ್ಪ ಕೃಷಿಕ; ಅಮ್ಮ ಹಿಂದಿ ಶಿಕ್ಷಕಿ. ಹೀಗಾಗಿ, ರಜಾ ದಿನಗಳಲ್ಲಿ ಕೆಲವಷ್ಟು ಹುಡುಗರು 'ಹಿಂದಿ ಪಾಠ' ಹೇಳಿಸಿಕೊಳ್ಳಲು ಆಗಾಗ ಮನೆಗೆ ಬರುತ್ತಿದ್ದರು. ಮನೆಗೆ ಯಾರೇ ಬರಲಿ; ಬಂದವರ ಜೊತೆ ಹಿಂದಿಯಲ್ಲೇ ಮಾತನಾಡಬೇಕೆಂದು ಮನೆಪಾಠಕ್ಕೆ ಬರುವ ಹುಡುಗರಿಗೆ ಅಪ್ಪ-ಅಮ್ಮ ಖಡಕ್ಕಾಗಿ ಹೇಳಿಯಾಗಿತ್ತು.


ಆ ದಿನ ಸಂಜೆ ವೇಳೆ ಪಕ್ಕದ ಮನೆಯ ಹರೀಶಣ್ಣ ಒಂದು ದೂರು ಕೊಡೋದಕ್ಕೋಸ್ಕರ ಮನೆಗೆ ಬಂದಿದ್ದರು. 'ನಮ್ಮ ಮನೆಯ ದನ ಅವರ ತೋಟದಲ್ಲಿ ಮೇಯುತ್ತಾ ಇದೆ' ಅನ್ನೋದು ಆ ದೂರು. ಹರೀಶಣ್ಣನೂ ಒಂದು ಕಾಲದಲ್ಲಿ ಅಮ್ಮನ ವಿದ್ಯಾರ್ಥಿಯೇ! ಹೀಗಾಗಿ, ಆ ದೂರನ್ನು 'ಹಿಂದೀಕರಿಸಿ' ಹೇಳಿದ್ದು ಹೀಗೆ:
"ಹಮಾರೇ ಪೆತ್ತ ತುಮ್ಹಾರೆ ಪಿತ್ತಿಲ್ ಮೇ ಮೇಯ್ತಾ ಹೈ. ಕ್ಯಾ ಕರ್ನಾ?"
'ಪೆತ್ತ' ಎಂದರೆ ತುಳುವಿನಲ್ಲಿ ದನ. ಪಿತ್ತಿಲ್ ಎಂದರೆ ಹಿತ್ತಿಲು. ಹರೀಶಣ್ಣನ ದೂರನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂದಿತ್ತು!

*****

ಪತ್ರ ಬರೆಯುವ ಕಲೆ, ಈಗಿನ ಬಹು ಮಂದಿಗೆ ಗೊತ್ತೇ ಇಲ್ಲವೇನೋ! ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಅಪ್ಪ ಆಗಾಗ ಅಂಚೆ ಕಾರ್ಡ್ಗಳನ್ನೂ ತಂದಿತ್ತು, ಅಜ್ಜಿ, ಮಾವಂದಿರಿಗೆ ನಮ್ಮ ಕೈಯಲ್ಲಿ ಪತ್ರ ಬರೆಸುತ್ತಿದ್ದರು.
ಅದು ನಾನು ಬರೆದ ಮೊದಲ ಪತ್ರ. ನನ್ನ ಅಜ್ಜಿ (ಅಪ್ಪನ ಅಮ್ಮ)ಗೆ ಆ ಪತ್ರ ಬರೆದಿದ್ದೆ. ಬರೆದ ನಂತರ ಪರಿಶೀಲನೆಗಾಗಿ ಅಪ್ಪನ ಕೈಗಿತ್ತೆ. ಮನಸೊಳಗೇ ನಕ್ಕ ಅಪ್ಪ, ಆ ಪತ್ರವನ್ನು ಅಮ್ಮನ ಕೈಗಿತ್ತರು. ಅಮ್ಮ ನಕ್ಕರೂ ಗುಟ್ಟು ಬಿಟ್ಟು ಕೊಡಲಿಲ್ಲ. ನಾನು ಮತ್ತೆರಡು ಬಾರಿ ಪತ್ರ ಓದಿಕೊಂಡರೂ ತಪ್ಪೇನೆನ್ನುವುದು ತಿಳಿಯಲೇ ಇಲ್ಲ. ಮರುದಿನ ನನ್ನ ತರಗತಿಯಲ್ಲಿ (ಅಮ್ಮ ನನ್ನ ಶಿಕ್ಷಕಿಯಾಗಿದ್ದರು ಕೂಡ) ಎಲ್ಲರೆದುರು ಮರ್ಯಾದೆ ತೆಗೆಯಬೇಕೆ?!


"ಅಜ್ಜಿಯವರಲ್ಲಿ ಬೇಡುವ ಆಶೀರ್ವಾದಗಳು"- ಎನ್ನಬೇಕಾಗಿದ್ದದ್ದು "ಅಜ್ಜಿಯವರಿಗೆ ಮಾಡುವ ಆಶೀರ್ವಾದಗಳು" ಎಂದಾಗಿತ್ತು. ಬರೆಯಬೇಕಾದರೆ ನನ್ನ ಭಾವನೆ ಸರಿಯಾಗಿತ್ತು. ಅಕ್ಷರದ ರೂಪ ಬೇರೆಯಾಗಿತ್ತು!


"ಮನುಷ್ಯನ ಮಾತಿಗೆ ಅರ್ಥವಿಲ್ಲ; ಭಾವನೆಗೆ ಅರ್ಥವಿರೋದು" ಅಂತ ಕವಿಯೊಬ್ಬರು ಹೇಳಿದ್ದಾರೆ. ಹೌದು; 'ಕುಡಿಯುವ ನೀರು' ಅಂತ ಬೋರ್ಡು ಇರುತ್ತೆ; ನೀರನ್ನು ಕುಡಿಯಬಹುದು ಅಂತ ಅರ್ಥ. 'ಕಚ್ಚುವ ನಾಯಿ' ಅಂತ ಬೋರ್ಡು ಇರುತ್ತೆ; ನಾಯಿಯನ್ನು ಕಚ್ಚ ಬಹುದು ಅಂತಲೇ ?!


*****


ಶಾಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ, ಅಮ್ಮ ಉತ್ತರ ಪತ್ರಿಕೆಗಳನ್ನು ತಿದ್ದಲು ಮನೆಗೆ ತರುವುದು ಮಾಮೂಲು. ಮೊನ್ನೆ ಊರಿಗೆ ಹೋಗಿದ್ದಾಗ, ಅಮ್ಮನ ಮೇಜಿನ ಮೇಲೆ ಒಂದಷ್ಟು ಉತ್ತರ ಪತ್ರಿಕೆಗಳು ಕಂಡವು. 'ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ' ಎಂಬ ಮುಖ್ಯ ಪ್ರಶ್ನೆಯತ್ತ ಕುತೂಹಲದಿಂದ ಕಣ್ಣಾಡಿಸಿದೆ. "ತುಲಸೀ ಹರ್ ಘರ್ ಕೀ ಆಂಗನ್ ಕೀ ಶೋಭಾ ಹೋತೀ ಹೈ" - ಎನ್ನುವುದನ್ನು ಹೀಗೆಲ್ಲಾ ಅನುವಾದಿಸಲಾಗಿತ್ತು. :


-> "ತುಳಸೀ ದಾಸರು ಪ್ರತಿ ಮನೆಯ ಅಂಗಳದಲ್ಲೂ ಶೋಭಿಸುತ್ತಾರೆ"


-> "ತುಳಸೀ ಗಿಡ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತದೆ" (greenhouse effect???)


-> "ತುಳಸಿ ಮನೆಯ ಅಂಗಳದ ತುಂಬೆಲ್ಲಾ ಶೋಭಿಸುತ್ತಿರುತ್ತದೆ"


ಪ್ರತಿ ವರುಷ ತುಲಸೀ ದಾಸರ 'ದೋಹಾ'ದ ಮೇಲೆ ಪ್ರಶ್ನೆ ಖಾಯಂ ಆಗಿ ಬರುತ್ತದಂತೆ. ಈ ವರುಷ ಇದೇ ಆ ಪ್ರಶ್ನೆ ಎಂದುಕೊಂಡ ವಿದ್ಯಾರ್ಥಿಗಳು ಹೀಗೆಲ್ಲಾ ಅನುವಾದಿಸಿದ್ದರು!!!


*****


ಭಾಷೆಯನ್ನೋದೇ ಹಾಗೆ. ಅದರ ಶೈಲಿ, ನಾವು ಯೋಚಿಸುವ ಶೈಲಿ ಎರಡೂ ಒಂದೇ ನೇರ ರೇಖೆಯಲ್ಲಿರುತ್ತವೆ. ಮಾತಿನಲ್ಲಿ ಕನ್ನಡ, ಇಂಗ್ಲೀಷ್ ಎಂದೆಲ್ಲಾ ಇರುವ ಹಾಗೆ ನಮ್ಮ ಸಾಫ್ಟ್ ವೇರ್ ಭಾಷೆಗಳಲ್ಲೂ ಸಿ, ಸಿ ಪ್ಲಸ್ ಪ್ಲಸ್, ಜಾವ ಎಂದೆಲ್ಲಾ ಹಲವು ಪ್ರಬೇಧಗಳು. ಒಬ್ಬ ಯಾವುದಾದರೂ ಒಂದು ಭಾಷಾ ನಿಷ್ಣಾತ ಆಗಿದ್ದರೆ ಸಾಕು, ಆತನನ್ನು  ಬುದ್ದಿವಂತ ಎಂದು ಪರಿಗಣಿಸಲಾಗುತ್ತದೆ. ಉಳಿದ ಭಾಷೆಗಳಲ್ಲೂ ಅದೇ ರೀತಿಯ 'logic'ಗಳು ಇರುತ್ತವೆ ಅನ್ನೋದು ಹಿಂಬದಿಯ ಸತ್ಯ.
ಇನ್ನು ನಮ್ಮ ಎಫ್ ಎಂ ರೇಡಿಯೋ ಕಾರ್ಯಕ್ರಮ ನಿರೂಪಕರ ವಿಷಯಕ್ಕೆ ಬರೋಣ. ಹಲವು ಭಾಷೆಗಳನ್ನು ಕಟ್ ಪೇಸ್ಟ್ ಮಾಡಿ, ಕೊನೆಯಲ್ಲೊಂದಷ್ಟು ಅಚ್ಚಗನ್ನಡದ ಒಗ್ಗರಣೆ ಹಾಕಿ ರಾತ್ರೋ ರಾತ್ರಿ ಜನಪ್ರಿಯರಾಗುತ್ತಾರೆ ಇವರು! ಮೊನ್ನೆ ಒಂದು ಎಫ್ ಎಂ ರೇಡಿಯೋ ನಿರೂಪಕ ಮಹಾಶಯನೊಬ್ಬ "ಈಗ sky is bending ಹಾಡು ಬರ್ತಾ ಇದೆ...  ಕೇಳಿ ಕೇಳಿಸ್ತಾ ಇರಿ" ಅಂದ. "ಗಗನವೇ ಬಾಗಿ ಭುವಿಯನು ... "ಎನ್ನುವ ಹಾಡು ಬಂದಾಗ ನಾನೊಮ್ಮೆ ದಂಗಾಗಿ ಬಿಟ್ಟೆ!


ತಪ್ಪಾಗಿ ಮಾತನಾಡುವುದು ಮಾಮೂಲಿಯಾಗಿ ಬಿಟ್ಟಿದೆ, ರೂಢಿಯಾಗಿ ಬಿಟ್ಟಿದೆ. 'ಬೃಹತ್ ಮಹಿಳೆಯರ ಸಮಾವೇಶ', 'ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ', 'ಉಚಿತ ಕಣ್ಣಿನ ಶಸ್ತ್ರ  ಚಿಕಿತ್ಸೆ', 'ಮಾಜಿ ಕರ್ನಾಟಕದ ಮುಖ್ಯ ಮಂತ್ರಿ' ಮುಂತಾದ ಪದಪುಂಜಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. 'ಬೃಹತ್ ಮಹಿಳೆಯರು' ಎಂದರೇನು? ಭಾಗವಹಿಸಲು ಬೇಕಾದ 'ಮಿನಿಮಮ್ ಸೈಜ್' ಅರ್ಹತೆಯನ್ನೂ ಅಲ್ಲಿಯೇ ನಮೂದಿಸಬೇಕಲ್ಲವೇ?!


*****


ರಾಜ್ಯಗಳನ್ನು ಭಾಷಾವಾರು ಹಂಚಿಕೆ ಮಾಡಿ ತುಂಬಾ ಸಮಯವಾಯಿತು. ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳಿ. ಶಾಸ್ತ್ರೀಯ ಸ್ಥಾನ-ಮಾನ ಪಡೆದ, ಪಡೆಯದ ಎಲ್ಲಾ ಭಾಷೆಗಳೂ ಇಲ್ಲಿ ಗುಯ್ ಗುಡುತ್ತಿರುತ್ತವೆ. ನಮ್ಮ ವಿಶಾಲ ಹೃದಯವಂತಿಕೆ ಗೊತ್ತೇ ಇದೆಯಲ್ಲ? ನಾವಾಗಿಯೇ ಅನ್ಯರ ಭಾಷೆಯನ್ನು ಗೌರವಿಸಿ ಅದರಲ್ಲೇ ಮಾತನಾಡಿಸುತ್ತೇವೆ. ತಪ್ಪು-ಸರಿಗಳ ಲೆಕ್ಕಾಚಾರ ನಿಮಗೆ ಬಿಟ್ಟದ್ದು. ಆದರೆ ಮಾತನಾಡುವ 'ಭಾವನೆ' ಮಾತ್ರ ಸ್ವಂತದ್ದಾಗಿದ್ದರೆ ಚೆಂದ.


*****


ನಾನು ಮನೆ ಬಿಟ್ಟು ಮೈಸೂರು ಬಂದ ದಿನಗಳಲ್ಲಿ ನನ್ನ 'ಮಂಗಳೂರು ಕನ್ನಡ'ದ ಬಗ್ಗೆ ಹಲವಾರು 'ಕಮೆಂಟು'ಗಳು ಬಂದಿದ್ದವು. "ಎಂತದು ಮಾರಾಯರೇ? ಮಂಡೆ ಬೆಚ್ಚ ಮಾಡಬೇಡಿ" ಎಂಬ ತಮಾಷೆಯ ಪ್ರತಿಕ್ರಿಯೆಯ ಜೊತೆಗೆ "ಅದೇನಪ್ಪ? ಬರೆದದ್ದನ್ನೇ ಮಾತನಾಡುತ್ತೀರಾ!" ಅಂತ ಆಶ್ಚರ್ಯವೂ ಜೊತೆಗೂಡುತ್ತಿತ್ತು. ಬರೆದಂತೆಯೇ ಮಾತನಾಡಬಹುದಾದ ಕೆಲವೇ ಭಾಷೆಗಳಲ್ಲಿ  ಕನ್ನಡವೂ ಒಂದು! ಇರಲಿ; ಮುಂದೊಂದು ದಿನ 'ಸ್ಪಷ್ಟವಾಗಿ ಕನ್ನಡ ಮಾತನಾಡುವುದೇ ಗಿನ್ನೆಸ್ ದಾಖಲೆಗೆ ಸೇರಿಸಬಹುದಾದ ಸಾಧನೆ' ಎಂದಾಗ ಬಹುದೇನೋ!
"ಅಣ್ಣಾ, ಅಯ್ಯಾ, ತಮ್ಮಾ, ಶ್ರೀಯುತರೇ" -ಗಳು "ಲೋ, ಮಚಾ, ಮಗಾ, ಗುರೂ"-ಗಳಾಗುತ್ತಿವೆ!
ಅಪ್ಪಟ ಕನ್ನಡ ಹಳೆಗನ್ನಡವಾಗುತ್ತಿದೆ!


*****


'ಮಾತಿನಿಂ ನಡೆ-ನುಡಿಯು, ಮಾತಿನಿಂ ಹಗೆ-ಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕೆ
ಮಾತೇ ಮಾಣಿಕವು ಸರ್ವಜ್ಞ'
-ಅಂತ ಸರ್ವಜ್ಞ ಹೇಳಿಲ್ಲವೇ?

ಈಗ ಮೊದಲನೇ ವಾಕ್ಯದ ವಿಶ್ಲೇಷಣೆ ಮಾಡೋಣ. ಮಾತಿನಂತೆಯೇ ಮನುಷ್ಯನ ವ್ಯವಹಾರ ಅನ್ನೋದು ಮೊದಲನೇ ವಾಕ್ಯವಾಯಿತು. ನಮ್ಮ ಇಂದಿನ ವ್ಯವಹಾರವನ್ನೇ ನೋಡಿ: ನಮ್ಮದಲ್ಲದವರ, ಪರ-ದೇಶಿಗಳ ಕೆಲಸವನ್ನು ಮಾಡುತ್ತೇವೆ. ಪರರ ಭಾಷೆಯನ್ನೇ ಆಡುತ್ತೇವೆ. ಆದರೆ ನನಗೊಂದು ಜಿಜ್ಞಾಸೆ. ನಮ್ಮ ಮಾತಿನಿಂದಾಗಿಯೇ ಪರರ ಕೆಲಸ(ವ್ಯವಹಾರ)ವನ್ನು ಮಾಡಬೇಕಾಯಿತೆ? ಅಥವಾ, ಇಂತಹ ಕೆಲಸದಿಂದಾಗಿಯೇ ಪರರ ಭಾಷೆಯನ್ನು ಆಡಬೇಕಾಯಿತೇ?
ಜೀವನಾಧಾರಕ್ಕಾಗಿ ಈ ವ್ಯವಹಾರವನ್ನು ಮಾಡುತ್ತಿದ್ದೇನೆ. ಹಾಗಾಗಿಯೇ ಮಾತೂ ಬದಲಾಗಿ ಬಿಟ್ಟಿದೆ. "ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎನ್ನುವ ದಾಸರ ಕೀರ್ತನೆಯನ್ನು ಹಾಡುವುದರೊಂದಿಗೆ ಸರ್ವಜ್ಞನ ವಚನದ ವಿಶ್ಲೇಷಣೆಯನ್ನು ನಿಲ್ಲಿಸಬೇಕಾಗುತ್ತದೆ!


ಮೂಗನೊಬ್ಬ ನಮ್ಮ ಬೆಂಗಳೂರಿನ ಬಾಡಿಗೆ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದಾನೆ. ನಮ್ಮ ಬಡಾವಣೆಯ ಬಹುಪಾಲು ಎಲ್ಲರ ಮನೆಯ ಕೆಲಸವನ್ನೂ ಮಾಡುತ್ತಾನೆ. ದಿನ ಪತ್ರಿಕೆ, ಹಾಲು ಮೊಸರು ಹಾಕುವುದು, ಕಸ ಗುಡಿಸುವುದು, ಗಾರೆ ಕೆಲಸ , ಹೀಗೆ ಹಲವು ಕೆಲಸಗಳನ್ನು ಮಾಡುತ್ತಾನೆ. "ನಿನಗೆ ಮಾತನಾಡಲು ಬರುತ್ತಿದ್ದರೆ ಏನು ಮಾಡುತ್ತಿದೆ?" ಎಂದು ಕೇಳಿದರೆ, "ಇದೇ ಕೆಲಸವನ್ನೇ ಮಾಡುತ್ತಿದೆ. ನನ್ನ ಮಟ್ಟಿನಲ್ಲಿ ಮಾತಿಗೂ ಜೀವನಕ್ಕೂ ಆಷ್ಟೇನೂ ಸಂಬಂಧವಿಲ್ಲ" ಎನ್ನುವುದನ್ನು ನಟನೆಯ ಮೂಲಕವೇ ತೋರಿಸುತ್ತಾನೆ.


"ಒಂದು ಸಾರಿ ಆ ಸರ್ವಜ್ಞನಿಗೆ ಈತನನ್ನು ತೋರಿಸಬೇಕು" -ಎಂದು ಆಗಾಗ ಅನಿಸುತ್ತದೆ!
*****


ಆಂಗ್ಲ ಭಾಷಾ ಮೋಹವಿದೆ ಎಂದ ಮಾತ್ರಕ್ಕೆ ಜನರೆಲ್ಲಾ 'ಆಂಗ್ಲ ಭಾಷಾ ಪಂಡಿತ'ರಾಗುತ್ತಿದ್ದಾರೆ ಅಂದುಕೊಂಡರೆ ಅದು ಶುದ್ಧ ತಪ್ಪು. ಅಲ್ಲೂ ತಪ್ಪು ಮಾಮೂಲು. 'I am is a boy' ಎಂದು ಚಿಕ್ಕವನಿದ್ದಾಗ ಶಿಕ್ಷಕರೊಬ್ಬರು ಹೇಳಿ ಕೊಟ್ಟ ನೆನಪು ನನಗೆ! ಇನ್ನು ಕೆಲವೊಂದು ಬಾರಿ ಪರಿಶುದ್ಧತೆ ಅತಿರೇಕಕ್ಕೆ ಹೋಗುವುದುಂಟು. 'pipe under test' ಅನ್ನುವ ಎಚ್ಚರಿಕೆಯ ಫಲಕದ ಕೆಳಗಡೆ 'ಪೈಪ್ ಕೆಳಗಡೆ ಪರೀಕ್ಷೆ' ಅಂತ word-to-word ಭಾಷಾಂತರಿಸಿದ್ದು ಬೆಂಗಳೂರಿನ ಹೊರ ವರ್ತುಲ ರಸ್ತೆಯುದ್ದಕ್ಕೂ ಇತ್ತೀಚೆಗೆ  ಕಂಡು ಬಂದಿತ್ತು. 'ಪಾಶ್ಚಾತ್ಯಮಿತ್ಯೇವ ನ ಸಾಧು ಸರ್ವಂ' ಅನ್ನೋದು ನಮ್ಮ ಜನಕ್ಕೆ ಯಾವಾಗ ಕಂಡು ಬರುತ್ತೋ!


"ಭಾವನೆಗೆ ಮಾತ್ರ ಅರ್ಥ ಇರೋದು ಅಂತ ನೀವೇ ಹೇಳಿದಿರಲ್ಲ? ಮತ್ಯಾಕೆ ಮಾತಿನಲ್ಲಿ ತಪ್ಪು ಕಂಡು ಹುಡುಕುತ್ತೀರ?" ಎಂದು ಕೇಳಿದವರಿಗೆ 'ತಪ್ಪು ಮಾತನಾಡಿದರೆ ತಪ್ಪು ಭಾವನೆಯೇ ಬರುತ್ತೆ' ಎಂದು ಹೇಳಲು ಮೇಲಿನವು ಎರಡು ಉದಾಹರಣೆಗಳು!


*****
ನಮ್ಮಲಿ ಭಾಷಾ ವೈವಿಧ್ಯತೆ ಇರುವುದು ಹೇಗೆ ಹೆಮ್ಮೆ ಪದ ಬೇಕಾದ ವಿಷಯವೋ, ಹಾಗೆಯೇ ಪದಗಳ ದುರ್ಬಳಕೆಯನ್ನು ಮಾಡುವುದು ವಿಷಾದನೀಯ ಸಂಗತಿ. ಭಾಷೆಯನ್ನು ಬಳಸುವಾಗ 'best', 'most' 'worst' ಮೊದಲಾದ 'superlative' ಪದಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕೇ ಹೊರತು ಎಲ್ಲಾ ಕಡೆ ಬಳಸಬಾರದು ಎನ್ನುವುದು ಬಲ್ಲವರ ಮಾತು. ಇಂದಂತೂ 'better than the best' ನಂತಹ ಪದ-ಪುಂಜಗಳೇ ಎಲ್ಲೆಡೆ ಕೇಳಿ ಬರುತ್ತಿವೆ, ಜನಪ್ರಿಯವಾಗುತ್ತಿವೆ. ಗೋಡೆ ಬರಹಗಳು, ಜಾಹೀರಾತುಗಳು, ರೇಡಿಯೋ ಮೊದಲಾದ ಮಾಧ್ಯಮಗಳಲ್ಲೂ ಮಿಂಚುತ್ತಿವೆ! ನಮ್ಮ ನಿಜವಾದ ಶ್ರೀಮಂತಿಕೆ ಮರೆಯಲ್ಲೇ ಉಳಿಯುತ್ತಿದೆ.


ಒಂದು ವೇಳೆ ಇಂದು ಬೆಂಗಳೂರಿಗೆ ನ್ಯೂಟನ್ನನು ಬಂದರೆ, ನ್ಯೂಟನ್ನನ ಬೆಂಗಳೂರಿನ ನಿಯಮಗಳು' ಈ ರೀತಿ ಬರ ಬಹುದೇನೋ!:


-> ನಿಯಮ ೧: ಭಾಷಾ ಶುದ್ಧತೆಯು ಯೋಚನಾ ಶುದ್ಧತೆಗೆ ನೇರ ಅನುಪಾತದಲ್ಲಿರುತ್ತದೆ.


-> ನಿಯಮ ೨: ಸಾಮಾನ್ಯವಾಗಿ, ನೀವೇ ಸ್ವಯಂ ಪ್ರೇರಿತರಾಗಿ ಕನ್ನಡದಲ್ಲಿ ಮಾತನಾಡದಿದ್ದರೆ, ನಿಮ್ಮೆದುರಿಗಿರುವ 'ಬೆಂಗಳೂರು ಕನ್ನಡಿಗರು' ಅನ್ಯ ಭಾಷೆಯನ್ನು ಉಪಯೋಗಿಸುವುದನ್ನು ಮುಂದುವರಿಸುತ್ತಾರೆ.


-> ನಿಯಮ ೩: ಬೆಂಗಳೂರಿಗೆ ಹತ್ತಿರವಿದ್ದಷ್ಟು ನಿಮ್ಮ ಕನ್ನಡದಲ್ಲಿ ಅನ್ಯ ಭಾಷಾ ಪದ ಪ್ರಯೋಗ ಜಾಸ್ತಿ ಇರುತ್ತದೆ.


ಇವೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯ. 'ಅವರವರ ಮನದಂತೆ ದೃಷ್ಟಿಯೂ ಬೇರೆ' ಅಂತ ಕವಿ ದಿನಕರ ದೇಸಾಯಿಯವರು ಹೇಳಿದ್ದಾರೆ.
ನೀವೇನಂತೀರಾ?

*****

Saturday, February 4, 2012

ಹಗೆಯನಾದರೂ ನಂಬು; ಹೊಗೆಯ ನೀ ನಂಬದಿರು!

 
[ಈ ಪದ್ಯವನ್ನು ಬರೆದದ್ದು ಕೆಲ ವರುಷಗಳ ಹಿಂದೆ. ಜೆಡಿಎಸ್ ಮತ್ತು ಬಿಜೆಪಿ ಸರಕಾರಗಳು ಕರ್ನಾಟಕದಲ್ಲಿ ಇಪ್ಪತ್ತು ತಿಂಗಳುಗಳ ಒಪ್ಪಂದದ 
ಸರಕಾರವನ್ನು ನಡೆಸುತ್ತಿದ್ದ ಸಂಧರ್ಭದಲ್ಲಿ ]
 
  
ನಗರಿಯಲಿ ನಡೆದ ಐಪೀಯೆಲ್ಲು ಪಂದ್ಯಗಳ
ಸೊಗವ ಸವಿಯುತ ಕುಳಿತ ನಮ್ಮ ನಾಡಿನ ಜನಕೆ
ಚಿಗುರಿತೈ ಇಂಡಿಯನ್ ಪೊಲಿಟಿಕಲ್ ಲೀಗನಾಡಿಸುವ ಮಹದಾಸೆ|
ನಗನಾಣ್ಯ ಎದುರಿಟ್ಟು ಹೊಲವನ್ನೆ ಅಡವಿಟ್ಟು
ಮಿಗಿಸಿದರು ಮುಗ್ಧ ಜನ ಹಸಿವನೂ ಬದಿಗಿಟ್ಟು
ನಗುಮೊಗದಿ ಶುರುವಾಗೆ ಕಿಕ್ಕಿರಿದ ಅಂಗಣವು ಸಫ಼ಲವೈ ಯೋಜಕತ್ವ||


ಕರುನಾಡ ತಂಡದಲಿ ತಮಿಳರೂ ಸೇರಿದರು
ಕರಿಯ ಜನತೆಯ ಜೊತೆಗೆ ಬಿಳಿಯರೂ ಸೇರಿದರು
ಬರಿಯ 'ಕಲಿ'ಗಳಿಗೆ ಬೆಲೆ, ಪಕ್ಷ-ಅಂತರವಿಲ್ಲವೆಂಬುದದು ಸತ್ಯ|
ಹೆಸರುಗೈಪೀಯೆಲ್ಲು, 'ದೊಡ್ಡಣ್ಣ' ಅಂಪೈರು
'ಹೊಸ ಬೇಲಿ' ತಂಡ ನಾಯಕನು ಶ್ರೀ ಮುಶರಪ್ಫ಼ು!
ಉಸಿರ ಬಿಗಿ ಹಿಡಿದು ಕೇಕೆ ಹಾಕುತಲಿಹರು ಮಿಲಿಯಗಟ್ಟಲೆ ಜನತೆ ತಾ||

ಇರುಳ ಹೊತ್ತಲಿ ಮಿನುಗೊ ಅಂಗಣವ ಕಂಡರೂ !
ಮರುಳಾಗಿ ಮನೆ-ಮಂದಿ ಜೊತೆಯಾಗಿ ಬಂದರೂ,
ಹುರುಳಿ ಹೊಲಕಿರದಿದ್ದ ವಿದ್ಯುತ್ತು ಅಂಗಣದಿ ಮಿಂಚಿದ್ದ ಪರಿಯ ಮರೆತು|
ಬೆರಳು ಮೂಗೇರಿ ಕೌತುಕವು ಬೆಳೆ-ಬೆಳೆಯಿತು
ನೆರಳಿಲ್ಲದಾಯಿತೈ ಕರುನಾಡ ಎದುರಿನಲಿ
ಹೋರಾಡಿ ಹೊರಳಾಡಿ ಕೈಸುಟ್ಟ ಬಂಗಾಳ ಗಂಡುಗಳುಪಾಂತ್ಯಗಳಲಿ||

ಉಳಿದಿಹುದು 'ಅಂತಿಮ'ವು; 'ಕರುನಾಡ' ಅಂಗಣದಿ
ಬೆಳೆದ ಕರುನಾಡಿಗರ ಎದುರು ''ಗಾಂಪರ ಗುಂಪು"!
ಅಳಿವು ಉಳಿವಿನ ಪ್ರಶ್ನೆ! ಉತ್ತರಿಸುವುದು ಕಾಲ, ಅಂತಿಮದಿ ಗೆಲ್ಲುವವರ|
ಹಲವು ಸಾಹಸ ಪಟ್ಟು ಮೊದಲರ್ಧ ಪಂದ್ಯದಲಿ
ಕೆಲವು 'ದಾಖಲೆ' ಬರೆದು ಗಾಂಪರನು ಗೋಳಾಡಿ
ಉಳಿದಿರುವ ಇಪ್ಪತ್ತು ಓವರಲು ತಾವುಗಳು ಇಲ್ಲೆ ನಿಲ್ಲುವೆವೆಂದರು!||

ಹೇಗೆ ಸಾಧ್ಯವದೆಂದು ಆಯೋಜಕರು ಕೇಳೆ
ಬಗೆ-ಬಗೆಯ ಧ್ವನಿಯಿಂದ ಒಳಗಿಂದ ಉತ್ತರಿಸೆ
ನಗು ಮೊಗವು ಬೆಂಡಾಗಿ ಆಸೆ ನೀರಾಗಿ ದು:ಖಾಂತ್ಯವಾಯ್ತೈಪೀಯೆಲ್ಲು|
ಹಗೆಯನಾದರು ನಂಬು; ಹೊಗೆಯ ನೀ ನಂಬದಿರು
ನಗು ಮೊಗದಿ ಎದುರಾಗೊ ಯಮನ ನೀ ನೆಚ್ಚದಿರು
ಸಖನ ರೂಪದಿ ಬರುವ ಖಳನ ನೀನೆಂದಿಗೂ ನಂಬದಿರು ಆಪ್ತಮಿತ್ರ||
 
[ ಹೊಗೆ= ಗೋಮುಖ ವ್ಯಾಘ್ರ, ಇಂಜಿನಿಯರಿಂಗ್ ಕಲಿಸಿದ ಹೊಸ ಅರ್ಥ]

Saturday, September 17, 2011

ನಾ ಕಂಡ ಬಾಲ್ಯ

ನಾನಾವಾಗ ಎರಡನೇ ಕ್ಲಾಸು. ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಪ್ರೈಮರಿ ಶಾಲೆ. ನನ್ನ ಅಮ್ಮ ಅಲ್ಲಿ ಹೆಡ್ ಮಾಸ್ಟರ್. ಅಪ್ಪ ಸಾಲ ಮಾಡಿ ಕೃಷಿ ಆಸ್ತಿ ಮಾಡಿದ್ದರು. ಮೇಲಾಗಿ, ನೀರಿಗಾಗಿ ಕಂಪ್ರೆಶ್ಸರ್ ಬೋರ್ ವೆಲ್ ಹೊಡೆಸಿ, ಕೈ ತೊಳೆಯಲೂ ನೀರು ಸಿಗದೆ ಕಂಗಾಲಾಗಿದ್ದರು. ನಮ್ಮ ಹತ್ತಿರದ ಸಂಬಧಿಕರೊಬ್ಬರಲ್ಲಿ ಐನೂರು ರೂಪಾಯಿ ಸಾಲ ಕೇಳ ಹೋಗಿದ್ದರು. ಅವರೋ ಶ್ರೀಮಂತರು. ಅಪ್ಪನ ಮುಖಕ್ಕೆ ಹೊಡೆವ ರೀತಿಯಲ್ಲಿ  " ನಿಮ್ಮಂತೋರಿಗೆಲ್ಲ ಹಣ ಕೊಡೋದಿಕ್ಕೆ ಆಗಲ್ಲ. ಏಕೆಂದರೆ ಕೊಟ್ಟರೆ ಹಿಂದೆ ಬರುತ್ತೆ ಎನ್ನೋ ನಂಬಿಕೆ ಇಲ್ಲ" - ಅಂದಿದ್ದರು. ಅಪ್ಪ ಮಾತು-ಕೈ ಎರಡನ್ನೂ ಖಾಲಿ ಮಾಡಿಕೊಂಡು ವಾಪಸಾಗಿದ್ದರು.

"ಹೌದು; ಕೃಷಿ ಎಂದರೆ ಅಷ್ಟೇ. ಬಂಡವಾಳ ಹಿಂದಕ್ಕೆ ಬರುತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲದ ಉದ್ಯೋಗಗಳಲ್ಲಿ ಮೊದಲ ಸ್ಥಾನ ಇದಕ್ಕೇ" -ಎಂದು ಅಂದಿದ್ದರು ಅಪ್ಪ ಅಂದು. ಅಮ್ಮನ ಸಂಬಳದ ಪೈಸೆ- ಪೈಸೆಯೂ ಕೃಷಿ ಭೂಮಿಯ ಮಣ್ಣನ್ನೇ ಮುಕ್ಕುತ್ತಿತ್ತು.

*****

ಅದೇ ಸಮಯದಲ್ಲಿ ನಮ್ಮ ಪ್ರೈಮರಿ ಶಾಲೆಯಲ್ಲಿ ವಾರ್ಷಿಕೋತ್ಸವವಿತ್ತು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಸಂಜೆ ಆರಕ್ಕೆ ಮಂತ್ರಿ ಮಹೋದಯರುಗಳ ಭರ್ಜರಿ ಭಾಷಣಗಳೊಂದಿಗೆ ಆರಂಭವಾಗುವುದು ಸಾಮಾನ್ಯ. ಆಮೇಲೆ ಡ್ಯಾನ್ಸು-ನಾಟಕ-ಯಕ್ಷಗಾನಗಳು ಬೆಳಗಿನವರೆಗೆ. ವಾರ್ಷಿಕೋತ್ಸವದಂದು ಶಾಲಾ ಅಂಗಣದಲ್ಲಿ ಕಡಲೆ- ಮಿಟಾಯಿ, ಪುಗ್ಗೆ, ಬ್ಯಾಟು, ಐಸ್ ಕ್ರೀಂ ಅಂಗಡಿಗಳು ಜಮಾಯಿಸುತ್ತಿದ್ದವು. ನನಗೂ, ನನ್ನ ಅಕ್ಕನಿಗೂ ಒಂದೊಂದು ಪುಗ್ಗ ತೆಗೆದುಕೊಳ್ಳುವ ಮನಸ್ಸಾಯಿತು. ಅಮ್ಮನ 'ಹೆಡ್ ಮಾಸ್ಟರ್' ಮೇಜಿನ ಬಳಿ ನಿಂತು ನಾನು ಮೆಲ್ಲನೆ, 'ಅಮ್ಮ, ಒಂದು ರೂಪಾಯಿ...' ಅಂದೆ. ಅಮ್ಮ ತನ್ನ ಪರ್ಸ್ ತೆಗೆದು ನೋಡುತ್ತಾರೆ, ಪರ್ಸ್ ಖಾಲಿಯಾಗಬಾರದೆಂದು ಇಟ್ಟಿದ್ದ ಎರಡು ರುಪಾಯಿ ಮಾತ್ರ ಇತ್ತು. ಒಂದೆರಡು ಕ್ಷಣ ಯೋಚಿಸಿ, ನಗು ತಂದುಕೊಂಡು ನನಗೂ, ನನ್ನ ಅಕ್ಕನ ಕೈಗೂ ಒಂದೊಂದು ರುಪಾಯಿ ಹಣ ಇತ್ತ ಕ್ಷಣ ಈಗಲೂ ನೆನಪಿದೆ. 

*****

ನನಗೆ ಹತ್ತು ವರುಷವಾಗುವ ಹೊತ್ತಿಗೆ ಅಪ್ಪ ಊರವರಿಂದ ಸಾಲ ಪಡೆಯುವುದನ್ನು ನಿಲ್ಲಿಸಿ ಬಿಟ್ಟಿದ್ದರು. ಕೃಷಿ ನಿಂತು ಹೋದರೂ ಚಿಂತೆಯಿಲ್ಲ; ನಿಂದನೆಯ ನುಡಿ ಬೇಡ ಎನ್ನುವುದು ನಮ್ಮ ಮನೆಯ ಅಂತಿಮ ನಿರ್ಧಾರವಾಗಿತ್ತು. ಅಡಿಕೆ ಗಿಡ ನೆಟ್ಟು ಏಳು ವರುಷವಾಗಿತ್ತು. ಅಂತೂ ಇಂತೂ, ನಾಲ್ಕನೇ ಬಾರಿ ತೆಗೆಸಿದ ಬೋರ್ ವೆಲ್ ನೀರು ತೋರಿಸಿತ್ತು. ಅಡಿಕೆ ಗಿಡಗಳು ಬದುಕಲಾರಂಭಿಸಿದ್ದವು. ಒಬ್ಬಿಬ್ಬರು ಕೂಲಿಯಾಳುಗಳು ವಾರದಲ್ಲಿ ಮೂರ್ನಾಲ್ಕು ದಿನಗಳಾದರೂ ಕೆಲಸಕ್ಕೆ ಬರುತ್ತಿದ್ದರು. 
ಇಂಥ ಸಮಯದಲ್ಲಿ ನಾನೇ ಕಿವಿಯಾರೆ ಕೇಳಿಸಿಕೊಂಡ ಕೆಲ ಮಾತುಗಳು, ಇವತ್ತಿಗೂ ನನ್ನಲ್ಲಿ ರೋಷವನ್ನುಂಟುಮಾಡುತ್ತವೆ.
 ನಮ್ಮ ದೇಶದ ಖ್ಯಾತ ವ್ಯಕ್ತಿಯೊಬ್ಬರ ಜನ್ಮ ದಿನೋತ್ಸವ. ಅಲ್ಲೊಬ್ಬ ವಿಚಾರವಾದಿ ಮಹಾಶಯ ಭರ್ಜರಿ ಭಾಷಣ ಮಾಡುತ್ತಿದ್ದ: ಹೇಳಿ ಕೇಳಿ ಬ್ರಾಹ್ಮಣ ವಿರೋಧಿ ಆತ. ಅವನದೇ ಮಾತಿನಲ್ಲಿ ಹೇಳುವುದಾದರೆ: "ಒಬ್ಬ ಬ್ರಾಹ್ಮಣ ಹಾಗೂ ಒಂದು ವಿಷ ಸರ್ಪ ನಿಮ್ಮ ಕಣ್ಣೆದುರು ಕಂಡರೆ ಮೊದಲು ನೀವು ಕೊಲ್ಲ ಬೇಕಾಗಿರುವುದು ಬ್ರಾಹ್ಮಣನನ್ನ. ಯಾಕೆಂದರೆ ಸರ್ಪದ ನಾಲಿಗೆಯಲ್ಲಿ ಮಾತ್ರ ವಿಷವಿರುತ್ತದೆ. ಆದರೆ ಬ್ರಾಹ್ಮಣನ ರೋಮ ರೋಮದಲ್ಲೂ ವಿಷವಿರುತ್ತದೆ."

ಯಾವುದೋ ಒಂದು ಕಾಲದಲ್ಲಿ ಯಾರೋ ಮಾಡಿದ್ದ 'so called' ತಪ್ಪನ್ನು ನನ್ನ ಸಮುದಾಯದ್ದೇ ದೋಷವೆಂದು ಈ ರೀತಿ ಸಾರಿದ್ದು ಖಂಡಿತಾ ಸರಿಯಲ್ಲ ಅನ್ನಿಸಿತ್ತು. 
*****

ನಾನು ಏಳನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಯನ್ನು ಇನ್ನೇನು ಬರೆಯುವ ಸಮಯ. 'ಮುಂದ್ಯಾವ ಸ್ಕೂಲು?' ಎಂದು ಮನದಲ್ಲೇ ಲೆಕ್ಕ ಹಾಕುತ್ತಿದ್ದೆ. ನನ್ನ ಅಕ್ಕ ನಮ್ಮೂರಿನದೇ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ಅಲ್ಲಿನ ಪಾಠ, ನಡವಳಿಕೆಗಳು ಅಕ್ಕನಿಗೂ, ನನ್ನ ಪೋಷಕರಿಗೂ ಹಿಡಿಸುತ್ತಿರಲಿಲ್ಲ. ನಾನಾಗಲೇ 'ಇಂಗ್ಲೀಷು ಮೀಡಿಯಂ ಬೇಕು' ಎಂದು ರಂಪಾಟ ಮಾಡುತಿದ್ದೆ. ಇಂಗ್ಲೀಷು ಮೀಡಿಯಂ ಹೈಸ್ಕೂಲಿಗೆ ಕಳುಹಿಸುವ ಆರ್ಥಿಕ ತಾಕತ್ತು ಅಪ್ಪನಿಗೆ ಇಲ್ಲ ಎಂದು ಒಳ ಮನಸು ಹೇಳುತ್ತಿದ್ದರೂ 'ಇನ್ನೊಂದು ಪ್ರಯತ್ನವ ಮಾಡೋಣ' ಅನ್ನಿಸುತಿತ್ತು. ಓರಗೆಯ ಸ್ತಿತಿವಂತರ ಮಕ್ಕಳೆಲ್ಲಾ ಸ್ಕೂಲ್ ಜೀಪ್ ಹತ್ತಿ ಪ್ರೈವೇಟ್ ಸ್ಕೂಲಿಗೆ ಹೋಗುವುದನ್ನು ನೋಡುತ್ತಿದ್ದಾಗ, ನನಗಂತೂ ಸರಕಾರಿ ಶಾಲೆಯ ಕನ್ನಡ ಪಾಠ ಬಿಟ್ಟು ಇಂಗ್ಲೀಷು ಕಲಿಯೋಣವೆನ್ನಿಸಿ, ಅಪ್ಪನ ಬಗ್ಗೆ ಇನ್ನಿಲ್ಲದ ಕೋಪ ಬರುತ್ತಿತ್ತು. 
ಕಾಕತಾಳೀಯವೆಂಬಂತೆ, ಅದೇ ಸಮಯಕ್ಕೆ ಅಮ್ಮನಿಗೆ ಹೈಸ್ಕೂಲಿಗೆ ಪ್ರೊಮೋಷನ್ ಆರ್ಡರ್ ಬಂತು. ಅದೆಷ್ಟೋ ವರುಷಗಳಿಂದ ಕಾದಿದ್ದ ಅಮ್ಮ ತಕ್ಷಣವೇ, ಹದಿಮೂರು ಕಿಲೋಮೀಟರ್ ದೂರದ 'ಉಪ್ಪಿನಂಗಡಿ'ಯ ಸರಕಾರಿ ಕಾಲೇಜನ್ನು ಆಯ್ಕೆ ಮಾಡಿಕೊಂಡರು.
ಏಳನೇ ತರಗತಿಯ ಪರೀಕ್ಷೆಯಲ್ಲಿ ತೊಂಭತ್ತಾರು ಶೇಕಡಾ ಅಂಕ ಪಡೆದ ನಾನು, ನನ್ನನ್ನೂ ಅಮ್ಮನ ಕಾಲೇಜಿಗೆ ಸೇರಿಸುವಂತೆ ಅಪ್ಪನೆದುರು ಧರಣಿ ಹೂಡಿದ್ದೆ. ಎಲ್ಲಾ ಅರ್ಹತೆಗಳೊಂದಿಗೆ! ಅಪ್ಪನು ಕಡೆಗೂ ಒಪ್ಪಿಕೊಳ್ಳಲೇಬೇಕಾಯಿತು.

ಅಮ್ಮನ ಜೊತೆಗೇ ಹತ್ತು ತರಗತಿಗಳನ್ನು ಕಳೆಯುವವನಿದ್ದೇನೆ ಎಂಬ ಸಂತೋಷ ಒಂದೆಡೆಗಿದ್ದರೆ, ಸ್ಪರ್ಧೆಗೆ 'ಪೇಟೆ'ಯ ಮಕ್ಕಳಿದ್ದಾರೆ, ಬುದ್ಧಿವಂತ ಹುಡುಗರ ಪರಿಚಯವೂ ಆಗುತ್ತದೆ ಎಂಬ ಜಂಭ ನನಗೆ!
ನಮ್ಮ ಹಳ್ಳಿಯಿಂದ ಉಪ್ಪಿನಂಗಡಿಗೆ ದಿನವೂ ಪ್ರೈವೇಟ್ ಸ್ಕೂಲಿಗೆ ಮಕ್ಕಳನ್ನು ಕಳುಹಿಸಿ, ಹಿಂದಕ್ಕೆ ಕರೆತರುವ ಪರಿಚಯದವರ ಜೀಪಿನಲ್ಲಿ ನಾನೂ, ಅಮ್ಮನೂ ಖಾಯಂ ಸೀಟು ಗಿಟ್ಟಿಸಿದ್ದೆವು. ತಿಂಗಳಿಗೆ ಮುನ್ನೂರು ರೂಪಾಯಿ ಇದಕ್ಕಾಗಿ ಕೊಡಬೇಕಾಗಿತ್ತು. ಹಣ ಕೇಳಿದಾಗಲೆಲ್ಲ ಅಪ್ಪ, ನಮ್ಮೂರ ಹೈಸ್ಕೂಲಿಗೇ ಸೇರಿಸಬೇಕಾಗಿತ್ತೆಂದು ಹಳಿಯುತ್ತಿದ್ದರು!

*****

ನನ್ನ ಅಪ್ಪ- ಅಮ್ಮನ ಮದುವೆಯ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ 'ಬ್ರಹ್ಮ ಗಂಟು' ಎಂಬುದರ ಶಕ್ತಿಯ ಬಗ್ಗೆ ವಿಪರೀತ ನಂಬಿಕೆ ಬರುತ್ತದೆ. ಅಪ್ಪನೋ, 'ಕೋಪದವನು' ಎಂಬ ಹಣೆಪಟ್ಟಿ ಕಟ್ಟಿಕೊಂಡು 'ಮದುವೇನೇ ಆಗಲ್ಲ' ಅಂತ ಹಠ ಕಟ್ಟಿ ಸ್ವಲ್ಪ ತಡವಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದವರು. ಕೃಷಿ ಹಾಗೂ ಹಿಂದಿ ಸಾಹಿತ್ಯಗಳಲ್ಲಿ ವಿಪರೀತ ಆಸಕ್ತಿ ಹೊಂದಿದ್ದವರು. ಒಂದೆರಡು ನಾಟಕಗಳನ್ನು ಬರೆದು ಆಡಿಸಿದವರು. ಧರ್ಮಸ್ಥಳದಲ್ಲಿ ಗೋಮಟೇಶನ ಪ್ರತಿಷ್ಠೆಯಾಗುವ ಸಮಯದಲ್ಲಿ 'ಗೋಮಟೇಶ್ವರ ಶತಕ' ಎಂಬ ಕೃತಿಯನ್ನು ಹಿಂದಿಗೆ ಅನುವಾದಿಸಿ ಧರ್ಮಾಧಿಕಾರಿಗಳ ಕೈಯಲ್ಲಿ ಶಹಬ್ಬಾಸ್ ಎನಿಸಿಕೊಂಡವರು. ಕುಟುಂಬದ ಇತರರ ಪ್ರಕಾರ ಅವರೊಬ್ಬ 'ಕೃಷಿಗಾಗಿ ನಷ್ಟ ಮಾಡಿಕೊಳ್ಳುವ' ವ್ಯಕ್ತಿ. ಅಮ್ಮನೋ, ಹಿಂದಿ ಟೀಚರು. ನಾಲ್ಕು ಜನರ ಮಧ್ಯೆ ಬೆರೆಯುವ ವ್ಯಕ್ತಿ. ಕೃಷಿ ವಿಷಯದಲ್ಲೂ ಪರಿಶ್ರಮಿ. ಆದರೆ ಲೆಕ್ಕಾಚಾರದವರು. 
ಅಪ್ಪ ಮದುವೆಯ ಸಮಯದಲ್ಲಿ ಜಾತಕ ನೋಡಿರಲಿಲ್ಲವಂತೆ. ನೋಡಿದ್ದರೆ ಅಮ್ಮನ ಜಾತಕ ಚೂರೂ ಹೊಂದಿಕೆಯಾಗುತ್ತಿರಲಿಲ್ಲವಂತೆ! 

ಅಪ್ಪನ ಪ್ರಕಾರ, ಯಾವುದೇ ವೃತ್ತಿಯೂ ವಂಶ ಪಾರಂಪರಿಕವಾಗಿದ್ದರೆ ಚೆನ್ನ. ಕೃಷಿಗಂತೂ ಅದು ಬೇಕೇ ಬೇಕು. 'ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿಕೊಂಡು ಅಣ್ಣ ತಮ್ಮಂದಿರ ಜೊತೆ ವಾದ ಮಾಡಿ ಖರೀದಿಸಿದ ಡಜನ್ ಗಟ್ಟಲೆ ಹಾರೆ ಪಿಕ್ಕಾಸುಗಳು, ದೊಡ್ಡದಾಗಿ ಕಟ್ಟಿಸಿದ ದನದ ಕೊಟ್ಟಿಗೆಗಳು, ದಿನವೂ ನೀರೆರೆದು ಪೋಷಿಸಿದ ಗಿಡಗಳನ್ನು ನೋಡಿಕೊಳ್ಳುವವರಾರೂ ಇಲ್ಲದಿದ್ದರೆ ಹೇಗೆ? ' ಎನ್ನುವುದು ಅವರ ವಾದ. ಅಮ್ಮನೋ, ಇದಕ್ಕೆ ಪಕ್ಕಾ ವಿರೋಧಿ. ಅವರವರ ಆಸಕ್ತಿಯ ವಿಷಯಗಳಲ್ಲಿ ಮುಂದುವರಿಯೋದೇ ಚೆನ್ನ ಎನ್ನೋದು ಅವರ ವಾದ.
ಒಂದಂತೂ ಸತ್ಯ. ನಾನು ಅಥವಾ ನನ್ನ ಅಕ್ಕ ಭಾಷಣ, ಪ್ರಬಂಧ, ಚರ್ಚೆಗಳಲ್ಲಿ ಚಪ್ಪಾಳೆ, ಬಹುಮಾನಗಳನ್ನು ಗಿಟ್ಟಿಸಿದಾಗ 'ನಮ್ಮ ಮಕ್ಕಳು' ಎಂದು ಸಂತಸ ಪಡುತ್ತಿದ್ದರು. ಹಿಂದಿ ಭಾಷೆಯ ವಿಷಯ ಬಿಟ್ಟರೆ ಅತ್ಯಂತ ಹೆಚ್ಚು ಸಾಮ್ಯತೆ ಹೊಂದಿದ್ದ ವಿಚಾರವೆಂದರೆ ಇದೇ ಅನ್ನೋದಂತೂ ಸತ್ಯ!

*****

ಮಗ ಮನೆ ಬಿಟ್ಟು ಹೊರಗೆ ಹೋದರೆ ಕೃಷಿಯ ಗತಿಯೇನು? ಎಂದು ಅಪ್ಪ ಅದೆಷ್ಟೋ ಬಾರಿ ಚಿಂತಿಸಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಅಪ್ಪ ಸಾಲ ಮಾಡಿ, ಖಾಲಿ ಜಾಗ ಖರೀದಿಸಿ ಕೃಷಿ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದಾಗ ಬಿದ್ದು-ಬಿದ್ದು ನಕ್ಕವರೇ ಹೆಚ್ಚು. 'ನಾವ್ಯಾಕೆ ಸಹಾಯ ಮಾಡಬೇಕು?' - ಎಂದು ನಾಸ್ತಿ ಎಂದವರೇ ಹೆಚ್ಚು. ಬಟ್ಟ ಬಯಲು ಭೂಮಿಗೆ "ಫುಟ್ಬಾಲ್ ಗ್ರೌಂಡು" ಎಂದು ತಮಾಷೆ ಮಾಡಿದವರು ಹಲವರು. ನಮ್ಮ ಮನೆಗೆ, ತೋಟಕ್ಕೆ ವಿದ್ಯ್ತುತ್ ಸರಬರಾಜು ಶುರುವಾಗಿದ್ದು ನಾನು ಐದನೇ ಕ್ಲಾಸಿನಲ್ಲಿರುವಾಗದಿಂದ. 'ಇವನ್ಯಾವಾಗ ಬೋರ್ ವೆಲ್ ಒಳಗೆ ಪಂಪ್ ಇಳಿಸುತ್ತಾನೆ?' ಎಂದು ಬಾಗಿಲು ಸಂದಿನಿಂದ, ಕುಚೋದ್ಯದಿಂದ ನೋಡಿದವರೇ ಹಲವರು.

*****

ಈಗ ಒಂದು ವರುಷದ ಹಿಂದೆ, ನಾನು ನನ್ನ ಮೊದಲ ಸಂಬಳವನ್ನು ತೆಗೆದುಕೊಂಡು ಅಪ್ಪನ ಕೈಗೆ ಇರಿಸಿದೆ. "ಕೃಷಿ ಕ್ಷೇತ್ರದಲ್ಲಿ ತಪ್ಪಿಯೂ ಬಂಡವಾಳ ಹೂಡಬೇಡ ಮಗನೇ" - ಎಂದರು ನಮ್ಮಪ್ಪ! ಎಂಭತ್ತು-ತೊಂಭತ್ತರ ದಶಕದಲ್ಲಿ 'ಅತ್ಯುತ್ತಮ ಕೃಷಿಕ'ನೆನಿಸಿಕೊಂಡು, ನಂತರ ಆ ಜಾಗ ಮಾರಿ ಹೊಸ ಭೂಮಿಯಲ್ಲಿ ಭವಿಷ್ಯ ಹುಡುಕಲಾರಂಭಿಸಿದವರವರು!ಜಾಗತೀಕರಣ, ಇದರಿಂದಾಗಿರುವ ಸಾಮಾಜಿಕ ಸ್ಥಾನ ಪಲ್ಲಟ, ಕೃಷಿಯ ಬಗೆಗಿನ ಒಟ್ಟು ತಾತ್ಸಾರದ ಬಗ್ಗೆ ವಿಚಾರಾತ್ಮಕ ಚರ್ಚೆ ನಡೆದು, ಯಾವುದೇ ಅಂತಿಮ ನಿರ್ಧಾರವಿಲ್ಲದ ಸಂಸತ್ ಅಧಿವೇಶನದಂತೆ, ನಾವು ಚರ್ಚಾಕೂಟವನ್ನು ಕೊನೆಗೊಳಿಸಿದೆವು.

"ನೋಡೇ, ವಾರ್ಷಿಕೋತ್ಸವದಂದು ಒಂದು ರುಪಾಯಿಗಾಗಿ ಭಯಪಟ್ಟು ಅರ್ಜಿ ಸಲ್ಲಿಸಿದ್ದ ನಿನ್ನ ಮಗ ಇದೀಗ ಸಂಬಳ ನಮಗೇ ಕೊಡುತ್ತಿದ್ದಾನಲ್ಲಾ?" - ಎಂದರು ಅಪ್ಪ. ಅಮ್ಮ ಮತ್ತು ಅಕ್ಕ ನಾನು ಅವರಿಗಾಗಿ ತಂದಿದ್ದ 'ಮೊದಲ ಸಂಬಳದ ಸೀರೆ'ಯ ಸಂತಸದಲ್ಲಿದ್ದರು.
ದನದ ಕೊಟ್ಟಿಗೆಯೊಳಗಿಂದ ಗಂಗೆ 'ನನಗೇನೂ ತಂದಿಲ್ವಾ?' ಎನ್ನುವ ರೀತಿಯಲ್ಲಿ "ಅಂಬಾ..." ಎಂದು ಕೂಗಿದಳು!

*****

Saturday, January 1, 2011

ಮೊಬೈಲು ಕಳ್ಳತನ!

ಎಲ್ಲಾ ಕಡೆ ಮೊಬೈಲು ಕಳ್ಳತನದ್ದೆ ಸುದ್ದಿ ಕೇಳಿ ಬರುತ್ತಿತ್ತು...
ಸರಣಿಗಳ್ಳತನ, ಜೋಬು ಕಳ್ಳತನ, ಇತ್ಯಾದಿ ಇತ್ಯಾದಿ...

ನಾನಂತೂ ತುಂಬಾ ಜಾಗರೂಕನಾಗಿದ್ದೆ ಇದರ ಬಗ್ಗೆ.
'ಜೀವ ಹೋದರೂ ಪರವಾಗಿಲ್ಲ, ಮೊಬೈಲು ಕಳಕೊಳ್ಳಬಾರದು'-
-ಎಂದು ಸದಾ ಜಾಗರೂಕನಾಗಿರುತ್ತಿದ್ದೆ; especially, ಪ್ರಯಾಣದ ಸಂದರ್ಭಗಳಲ್ಲಿ.
ಸದಾ ಜಾಗರೂಕ!!!
-----

ಬೆಂಗಳೂರಿಗೆ ಬಂದು ಆಗಷ್ಟೆ ಎರಡು ವಾರ...
ಬೆಳಗ್ಗೆ ಆಫೀಸು; 'ರಾತ್ರಿ' ಮನೆ.
ಹೋಗೋದು-ಬರೋದು ಬೈಕಿನಲ್ಲೇ...
So, ಮೊಬೈಲು ಸೇಫು ಅಂತ ನಿರಾಳವಾಗಿ ಬದುಕಲಾರಂಭಿಸಿದ್ದೆ. ಅಷ್ಟೇ...

ಅವತ್ತೊಂದು ರಾತ್ರಿ...
ರಾತ್ರಿ ಹತ್ತಾದರೂ roommate 'ರಿತೇಶ'ನ ಪತ್ತೇನೇ ಇಲ್ಲ!
ಛೆ! ಕಾಲ್ ಮಾಡೋಣ ಅಂದ್ಕೊಂಡ್ವಿ ನಾವೆಲ್ಲಾ...
ಉಹುಂ! ರಿಂಗಾಗ್ತಾನೆ ಇಲ್ಲ!

Finally, ಹತ್ತೂವರೆಗೆ ಬಂದ ರಿತೇಶ...
'ಸೆಲ್ ಹೋಯ್ತು ಕಣ್ರೋ ಅಂದ...'
Oh my god! ಹೊಚ್ಚ ಹೊಸ ನೋಕಿಯಾ 'N' ಸೀರೀಸು,
ಅದರಲೆಷ್ಟೋ 'contact' ಗಳು!  ಅದೆಷ್ಟೋ ನೆನಪುಗಳು...


ಎಲ್ಲಾ ಹೋಯ್ತಲ್ಲಾ ನಿಮಿಷಾರ್ಧದಲ್ಲಿ ಅಂತ ಅಂದ್ಕೊಂಡೆ...

- ಅವತ್ತಿನಿಂದ ನನ್ನ ಮೊಬೈಲನ್ನ ತೀವ್ರ ನಿಗಾ ಘಟಕದಲ್ಲಿ ಇಟ್ಟಿರ್ತೀನಿ!
ನನ್ನ ಗ್ರಹಚಾರ ಕೆಟ್ಟರೂ ಮೊಬೈಲು ಪರರ ಸ್ವತ್ತಾಗಬಾರದು ಎಂಬ ಏಕ ಮಾತ್ರ ಉದ್ದೇಶದಿಂದ!
ಸದಾ ಜಾಗರೂಕ!!
-----


ಮೊನ್ನೆ ಮೊನ್ನೆ ಅಮ್ಮ ಬಂದಿದ್ದರು ಬೆಂಗಳೂರಿಗೆ... !
ಆಫೀಸಿಗೆ ರಜಾ ಹಾಕಿ ಸುತ್ತಿದ್ದೆ ಸುತ್ತಿದ್ದು-
ಸೌತ್ ಎಂಡ್ ಸರ್ಕಲ್ ನಿಂದ ನಾರ್ತ್ ಎಂಡ್ ಯೆಲಹಂಕವರೆಗೆ!
ನಡು-ನಡುವೆ ಆ ಮಾಲ್, ಈ ಮಾಲ್; ವಿಧಾನ ಸೌಧ ವಿಕಾಸ ಸೌಧ!
ಅವರಿವರ ಮನೆ, ಕಬ್ಬನ್ ಪಾರ್ಕು, ಹೈಕೋರ್ಟು ಮೆಟ್ಟಿಲೂ ಏರಿದ್ದಾಯಿತು!
ಪರಂತು, ಮೊಬೈಲು ಬಗ್ಗೆ ಮಾತ್ರ ನಾನು ಸದಾ ಜಾಗರೂಕ!

ಸುತ್ತಿದ್ದಾಯಿತು....
ಅಮ್ಮನನ್ನು ಬಿಟ್ಟು ಬರಬೇಕು ಇನ್ನು...
ಲಗೇಜು ತುಂಬಾ ಇದೆ...ಚಳಿಯೂ ತುಂಬಾ.
 ಬೈಕು ಬೇಡ ಬಸ್ಸಲೇ ಹೋಗೋಣ ಎಂದರು ಅಮ್ಮ
ಸರಿ, ಹೊರಟಾಯಿತು, ಮೆಜೆಸ್ಟಿಕ್ಕು ಬಸ್ಸು ಹತ್ತಿದ್ದೂ ಆಯಿತು.
ರಶ್ಶು ಏನೂ ಇರಲಿಲ್ಲ ಬಸ್ಸಲ್ಲಿ.


ಅಮ್ಮ ಪಕ್ಕದಲ್ಲಿ ಕೂತಿದ್ದರು, ಏನೋ ಆಲೋಚನೆಯಲ್ಲಿ ಮುಳುಗಿದ್ದರು.
ಹೇಗೂ ಸಮಯವಿದೆ, ಮೆಸೇಜು ಮಾಡಾಣ ಎಲ್ಲರಿಗೂ ಅಂತ ಅಂದುಕೊಂಡೆ.
ಮೊಬೈಲು ತೆಗೆದೆ ಜೋಬಿಂದ...
ಹಾಂ! ಹೇಳಲೇ ಇಲ್ಲ ನಿಮಗೆ...
ನನ್ನ ಪ್ಯಾಂಟಿನ ಬಲ ಜೋಬು ಯಾವತ್ತೂ ಮೊಬೈಲಿಗೆ ಮೀಸಲು. ಯಾವತ್ತೂ...

ಸಿಗ್ನಲ್ಲು ಗಳು ಕಳಿಯುತ್ತಿದ್ದಂತೆ, ಹಂಪುಗಳು, ಕನ್ಸ್ತ್ರಕ್ಷನ್ನುಗಳು ಮುಗಿಯುತ್ತಿದ್ದಂತೆ, 
ಬಂತು ಮೆಜೆಸ್ಟಿಕ್ಕು.
ಪ್ಲಾಟ್ಫಾರ್ಮ್ ನಂಬರ್ ಹತ್ತೊಂಬತ್ತು. ಬಿ ಎಂ ಟಿ ಸಿ ಬಸ್ಸು ಬಂದು ನಿಂತಿತು.

ಹೌದು, ಬಸ್ಸಿನಿಂದ ಇಳಿದವರಲ್ಲಿ ನಾವೇ ಕೊನೆಯವರು.
ಮೊದಲು ಅಮ್ಮ, ಅನಂತರ ನಾನು.
ಇನ್ನೇನು ನಾನು ಇಳೀ ಬೇಕು, ಬಸ್ಸು ಮತ್ತೆ ಹೊರಟಿದೆ,
ಸಿಕಾಪಟ್ಟೆ ಜನರು ಒಳಗೆ ಹತ್ತುತ್ತಿದ್ದಾರೆ...
ಬಹುಶಃ, ಯೆಲಹಂಕ ಕಡೆಗೆ ಇದೇ ಕೊನೆಯ ಬಸ್ಸೋ ಏನೋ...

ಜಾಗ್ರತೆಯಿಂದ, ಜಾಗ ಮಾಡಿಕೊಂಡು, ಇಳಿದೆ.


ಇಳಿದು ನೋಡುತ್ತೇನೆ...
ಮೊಬೈಲು ಮಾಯ!!!

ಭಗವಂತಾ!....ಹೊಹ್ ನನ್ನರ್ಧ ಜೀವವೆ ಹೋದಂತನಿಸಿತು...

'ಸಾರ್, ಬೇಗ ಮಿಸ್ ಕಾಲ್ ಕೊಡಿ; ಇಲ್ಲಾ ಅಂದ್ರೆ ಸ್ವಿಚ್ಚ್ ಆಫ್ ಮಾಡ್ಬಿಡ್ತಾರೆ ಜನ' - ಡ್ರೈವರ್ ಉವಾಚ...
ಒಹ್ ಹೌದು; ಅಮ್ಮನ ಕೈಯ್ಯಿಂದ ಮೊಬೈಲು ಇಸ್ಕೊಂಡೆ...
ಸ್ಪೀಡ್ ಡಯಲ್ ನಂಬರ್ ಐದು... ಒತ್ತೆ ಬಿಟ್ಟೆ...
'ಸ್ವಿಚ್ಚ್ ಆಫ್ ಆಗಿದ್ರೆ ಪ್ರತಿಯೊಬ್ಬರನ್ನೂ ಚೆಕ್ ಮಾಡಲೇ ಬೇಕು...!
-ಹೇಳಿತು ನನ್ನ ಮನಸ್ಸು, ಯಾಕಂದ್ರೆ, ಅದು- ನನ್ನ ಮೊಬೈಲು!!!



ಒಂದು ನಿಮಿಷ....
ಕಾಲ್ ಕನೆಕ್ಟ್ ಆಗುತ್ತಿದೆ! ಎದೆ ದವ-ದವ ಹೊಡೆದುಕೊಳ್ಳುತ್ತಿದೆ!
ಉಸಿರು ಎಳೆದು ಕೊಳ್ಳುತ್ತಿದ್ದೇನೆ ಭರ-ಭರನೇ...ಭರ-ಭರನೇ!!!

-----

ಎಲಾ!!! ಜರ್ಕಿನ್ನಿನ್ನ ಜೇಬಿನಲ್ಲೂ ಭರ-ಭರನೇ ಸದ್ದು...
ಪುಣ್ಯಕ್ಕೆ, ಬರೀ ವೈಬ್ರೇಷನ್ನು, ಮೊಬೈಲು ಸೈಲೆಂಟು!
ಯಾವುದೋ ಯೋಚನೆಯಲ್ಲಿ 'ಮೀಸಲಾಗಿದ್ದ' ಪ್ಯಾಂಟನ್ನು ಬಿಟ್ಟು,
ಜರ್ಕಿನ್ನಿನ ಜೋಬಿನಲ್ಲಿ ತೋರಿಸಿದ್ದೆ ಮೊಬೈಲನ್ನು.
ಠಕ್ಕ್ ಅಂತ ಮೊಬೈಲಿನ ಕೆಂಪು ಬಟನ್ ಒತ್ತಿದೆ...!
-----

'ಏನಾಗ್ತ ಇದೆ ಗುರೂ...?' ಅರ್ಜೆಂಟಿನ ಡ್ರೈವರ್ ಎಸೆದ ಪ್ರಶ್ನೆ.
ಏನು ಹೇಳಲಿ? ಜನ ಎಲ್ಲಾ ನನ್ನನ್ನೇ ಕೆಕ್ಕರಿಸಿ ನೋಡುತಿದ್ದಾರೆ...
ನನ್ನ ಜೋಬಲ್ಲೆ ವೈಬ್ರೇಟಿಂಗು ಅಂದರೆ ಒದೆ ಗ್ಯಾರಂಟಿ!
ಏನು ಹೇಳಲಿ? ಜನ ಎಲ್ಲಾ ನನ್ನನ್ನೇ ಕೆಕ್ಕರಿಸಿ ನೋಡುತಿದ್ದಾರೆ...!

"ಸಾರ್ ಸ್ವಿಚ್ಚ್ ಆಫ್ ಆಗೋಯ್ತು; ಹುಡುಕಿ ಏನೂ ಪ್ರಯೋಜನವಿಲ್ಲ ಇನ್ನು.
ಲೋಕ ಕೆಟ್ಟೋಗಿದೆ ಸಾರ್, ಒಳ್ಳೆಯೋರ್ಗೆ ಇದು ಕಾಲವಲ್ಲ,
ಯಾರನ್ನೂ ನಂಬೋ ಹಂಗಿಲ್ಲ."
ಕೆಟ್ಟು ಹೋದ ಕಾಲದ ಬಗ್ಗೆ ಬಿಟ್ಟಿ ಭಾಷಣ ಬಿಗಿದು ಬಂದೆ...!
ಬಸ್ಸು ಭರ್ರೆಂದು ಹೊರಟಿತು; ಜನ ಎಲ್ಲಾ ಕನಿಕರದ ದೃಷ್ಟಿ ಬೀರುತ್ತಿದ್ದರು...
-----

ಅಮ್ಮನಿಗೆ ನಾಟಕವನ್ನ ಅರ್ಥ ಮಾಡ್ಸೋದ್ರಲ್ಲಿ ಸಾಕೋ ಸಾಕಾಯ್ತು!!!
ಇವತ್ತಿಗೂ, ನನ್ನ ಪ್ಯಾಂಟಿನ ಬಲ ಜೋಬು ಯಾವತ್ತೂ ಮೊಬೈಲಿಗೆ ಮೀಸಲು. ಯಾವತ್ತೂ...
ಜೆರ್ಕಿನ್ ಹಾಕ್ಕೊಂಡಾಗಲೂ!!!











Friday, November 19, 2010

ನಾಗರಿಕರ ಮೇಲೆ ಜಾಗತೀಕರಣದ ಪ್ರಭಾವ


ಇಪ್ಪತ್ತೊಂದನೇ ಶತಮಾನದ "ಆಧುನಿಕ" ಜನರ ಜೀವನ ಶೈಲಿಯನ್ನೊಮ್ಮೆ ನೋಡೋಣ: ದೂರದ ಸ್ವಿಜರ್ಲಾಂಡಿನಲ್ಲಿ ತಯಾರಾದ ಅಲರಾಂ ಗಡಿಯಾರವನ್ನು ಒಂದೆರಡು ಬಾರಿ snooze ಮಾಡಿ ಹೇಗೋ ಎದ್ದರೆ, ಮುಂದಿನ ಕೆಲಸಗಳೇನೆಂದು ಬೇರೆ ಹೇಳಬೇಕಿಲ್ಲ. ಮಗದೊಂದು ಪರದೇಶದಲ್ಲಿ ತಯಾರಾದ toothpaste ninದ ನೊರೆ ಬರಿಸಿಕೊಂಡರೆ ಮುಂದೆ ಒಂದರಮೇಲೊಂದರಂತಾಗಿ, ರಾತ್ರಿ ಹೊತ್ತು ಉರಿಸುವ ಸೊಳ್ಳೆ "coil"ಗಳ ತನಕ 'ಆಮದು' ವಸ್ತುಗಳ ಬಳಕೆ ನಡೆಯುತ್ತಲೇ ಇರುತ್ತದೆ. ಅದೇ ನಮ್ಮ ತಾತ, ಮುತ್ತಾತರ ಜೀವನ ಶೈಲಿಯನ್ನೊಮ್ಮೆ ನೋಡಿ: ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು 'ಗಂಗೇಚ ಯಮುನೇ ಚೈವ' ಎನ್ನಲಾರಂಭಿಸಿದರೆ ಅಜ್ಜಿಯಂತೂ, ಕೋಳಿ ಕೂಗುವ ವೇಳೆಗಾಗಲೇ ಮನೆ ಕೆಲಸವನ್ನು ಶುರು ಮಾಡಿ ಬಿಡುತ್ತಿದ್ದಳು. ರಾತ್ರಿ ಮೊಮ್ಮಕ್ಕಳಿಗೆ ಜೋಗುಳ ಹಾಡಿ "ಗೋವಿಂದಾ-ಪರಮಾತ್ಮಾ" ಎಂದರೇನೇ ರಾತ್ರಿಯಾಯಿತು ಎಂದರ್ಥ!
ಈ ಎರಡು ವಿಷಯಗಳ ತುಲನಾತ್ಮಕ ವಿಮರ್ಶೆಯನ್ನೀಗ ಮಾಡೋಣ. ಈ ಅಜಗಜಾಂತರಕ್ಕೆ ಕಾರಣವೇ "ಜಾಗತೀಕರಣ!"
ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ಆಗಿನ ಅರ್ಥ ಮಂತ್ರಿ ಮನಮೋಹನ್ ಸಿಂಗ್ ಹೇಳಿದ ಮಾತನ್ನು ಕೇಳಿ:"ಜಾಗತೀಕರಣವೆಂಬುದು ಭಾರತ ಮಾತೆಯ ಕೊರಳಿಗೆ ಹಾಕಿದ ಹೂವಿನ ಮಾಲೆ!!" ಆದರೆ, ಅಂದು ಹೂವೆಂದು ಭಾವಿಸಿದುದು ಇಂದು ಮಾತ್ರ "ಹಾವಿನಂತೆ ಪರಿಣಮಿಸುತ್ತಿರುವುದು ಮಾತ್ರ ವಿಪರ್ಯಾಸ!.
ನಿಮಗೆ ಆಶ್ಚರ್ಯವಾಗಬಹುದು.. ಭಾರತ- ಹಳ್ಳಿಗಳ ದೇಶ-ಹಳ್ಳಿಗಳಲ್ಲೇ ನಾಶವಾಗುತ್ತಿದೆ. ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ನಾವು ನಮ್ಮ "ಸ್ವಂತಿಕೆಯನ್ನು ಕಳೆದುಕೊಳ್ಳುತಿದ್ದೇವೆ.ಸ್ವಾತಂತ್ರ್ಯವನ್ನು ಕಳೆದುಕೊಳ್ಳುತಿದ್ದೇವೆ.ನಮ್ಮ ಸ್ವಂತ ನಾಗರಿಕತೆಯ ಪರಾಮರ್ಶೆಗೆ,ಇನ್ನೂ ಹೆಚ್ಚಿಗೆ ಹೇಳುವುದಾದರೆ, ನಮ್ಮದೇ ಪೂಜ್ಯ ಗೋಮಾತೆಯೆ 'ಗೋಮೂತ್ರ'ಕ್ಕೂ, ಪಾವನ 'ಪಂಚಗವ್ಯ'ಕ್ಕೂ ಪರಕೀಯರ "ಪೇಟೆಂಟ್" ಕೇಳಬೇಕಾಗಿ ಬಂದಿದೆಯೆಂದರೆ ಜಾಗತೀಕರಣದ ಪ್ರಭಾವವೇನೆಂದು ನೀವೇ ಆಲೋಚಿಸಿ!!
ಒಂದು ಮಾತನ್ನು ಇಲ್ಲಿ ಹೇಳಬೇಕು. ಅದೇ ಡಾರ್ವಿನ್ನನ "ವಿಕಾಸವಾದ"ದ ಸಿದ್ಧಾಂತ.ಆತನ ಪ್ರಕಾರ, ಈ ವಿಶ್ವದಲ್ಲಿ ಬಲಶಾಲಿಗಳಷ್ಟೇ ಉಳಿಯುತ್ತಾರೆ. ಇಂದಿನ ಜಾಗತೀಕರಣಗೊಂಡ ಜಗತ್ತಿಗೆ ಇದು ಹೇಳಿಮಾಡಿಸಿದ ಸಿದ್ಧಾಂತವೇನೋ!!? ಇಂದು ಪ್ರತೀ ಕ್ಷೇತ್ರದಲ್ಲೂ "ಸ್ಪರ್ಧೆ" ವಿಪರೀತವಾಗತ್ತಿದೆ. ಈ ತೀವ್ರತರದ ಸ್ಪರ್ಧೆಯು ಜನರ ಜೀವನದ ವೇಗವನ್ನು ಹೆಚ್ಚಿಸಿದೆ. ಅದೇ-"ಜಿಚಿsಣ ಟiಜಿe" ವೇಗದ ಪರಾಕಾಷ್ಟೆಯೆಂದರೆ ನಾಶ! ಹೌದು; ನಮ್ಮತನವು ನಮ್ಮಲ್ಲೇ ನಾಶವಾಗತ್ತಿದೆ. ಕಾರಣವದೇ- ಜಾಗತೀಕರಣ! ಜುಲೈ 11,2006ರಂದು ಮುಂಬಯಿಯಲ್ಲಿ ಭಯೋತ್ಪಾದಕರಿಂದ ಬಾಂಬ್ ಸ್ಪೋಟಗೊಂಡಿತು. ಮರುದಿನ ಪತ್ರಿಕೆಗಳ ವರದಿ ನೋಡಿ: "ಜನಜೀವನ ಒಂದೇ ದಿನದಲ್ಲಿ ಸಹಜ ಸ್ಥಿತಿಗೆ ಮರಳಿದೆ"!! ಪಾಪ; ವೇಗವಾಗಿ ಬದಲಾಗುತ್ತಿರುವ ವಾಣಿಜ್ಯ ರಾಜಧಾನಿಯಲ್ಲಿ, ಒಂದು ದಿನ ಬಿಡುವು ಮಾಡಿಕೊಂಡರೆ ಆಗವ ದುಪ್ಪಟ್ಟು ನಷ್ಟದ ಅರಿವು ನಮಗೇಕೆ ಆಗುತ್ತಿಲ್ಲ? ನಿಜ; ಜಾಗತೀಕರಣವು ನಮ್ಮ 'ಯೋಚನಾಲಹರಿ'ಯನ್ನೂ ಬದಲಾಯಿಸಿ ಬಿಟ್ಟಿದೆ. ವಾಸ್ತವವಾಗಿ, ನಾವು ಆ ಲಹರಿಗೆ ಒಗ್ಗಿಕೊಳ್ಳದಿದ್ದರೆ ಬಲಹೀನೆರಾಗುತ್ತೇವೆ. ಮತ್ತೆ ಡಾರ್ವಿನ್ನನ ಸಿದ್ಧಾಂತ- "ಬಲಹೀನರ ಅಂತ್ಯ!" ಜಾಗತೀಕರಣ ನಮ್ಮನ್ನು ಆ ಸ್ಥಿತಿಗೆ ತಂದು ನಿಲ್ಲಿಸಿದೆ.
"ಕಾಲ"ವೆಂಬುದು ಯಾವುದೇ ಶಾಸ್ತ್ರವನ್ನು ನಾಶ ಮಾಡಬಲ್ಲುದು. "ಕಾಲಾಯ ತಸ್ಮೈ ನಮಃ" -ಅಲ್ಲವೇ? 'ಆಧುನಿಕ' ಭಾರತೀಯ ಮಹಿಳೆಯನ್ನೊಮ್ಮೆ ನೋಡಿ. ರಾತ್ರಿ ಹತ್ತರ ನಂತರವೇ ಆಕೆಯ ಕೆಲೆಸ "ಛಿಚಿಟಟ ಛಿeಟಿಣಡಿe"ಗಳಲ್ಲಿ ಆರಂಭವಾಗುವುದು. ಅದು ತಪ್ಪಿದರೆ, ವಿವಿಧ 'shiಜಿಣ'ಗಳ ಕೆಲಸ! ಮಗುವನ್ನು ಜೋಗುಳದಲ್ಲಿಟ್ಟುಕೊಂಡು ಮುತ್ತಿಡುವ, ಮುದ್ದಾಡುವ ಮಾತೆಯರಾರೂ ಇನ್ದು ಕಾಣಲಾರರು. ಆ ಮಕ್ಕಳೂ ಅಷ್ಟೇ; ಹುಟ್ಟುವ ಮೊದಲೇ ಹಲವು ಸುತ್ತಿನ ಪರೀಕ್ಷೆ(?)ಗಳನ್ನೆದುರಿಸಿ, ಇನ್ನೇನು ಅಂಬೆಗಾಲಿಡುವ ಹೊತ್ತಿಗೇ "ನರ್ಸರಿ", "ಏ.ಉ"ಛಿಟಚಿssಗಳ "ಇಟಿಣಡಿಚಿಟಿಛಿe ಣesಣ" ಆರಂಭವಾಗಿ ಬಿಡುತ್ತದೆ. ಇಂಥ ಮಕ್ಕಳು ಬೆಳೆಯುವ "ಸಂಸ್ಕಾರ"ವಾದರೂ ಏನು? ಇಂಥ ಮಕ್ಕಳೇ ಮುಂದೆ ಮಾತೆಯರಾದಾಗ, ಯಾವ ನೈತಿಕ ಆಧಾರದಲ್ಲಿ, ಅವರಿಂದ "ಭಾರತೀಯ ಮಾತೃತ್ವ"ವನ್ನು ನಿರೀಕ್ಷಿಸೋಣ? ಮತ್ತೆ ಜಾಗತೀಕರಣವನ್ನು ಹಳಿಯದೆ ಉಪಾಯವಿಲ್ಲ!
"ಪಾಶ್ಚಾತ್ಯಮಿತ್ಯೇವ ನ ಸಾಧು ಸರ್ವಂ" -ಎಂಬ ಉಕ್ತಿಯನ್ನು ನಾವು ಮರೆಯುತ್ತಿದ್ದೇವೆ. ದೂರದ ಅಮೇರಿಕಾದ ಬೆಟ್ಟ ಕಣ್ಣಿಗೆ ನುಣ್ಣನೆ ಕಾಣುತ್ತದೆ. ನಿಜ ಹೇಳಬೇಕಾದರೆ, ಇಂದಿನ ನಾಗರಿಕರಿಗೆ, ಹಣ ಸಂಪಾದಿಸುವ ವಿವಿಧ ದಾರಿಗಳನ್ನು ತೋರಿಸುದುದು, ಇದಕ್ಕಾಗಿ ನೈತಿಕ ಅಥವಾ ಕುಖ್ಯಾತ 'ಆಯಾಮಗಳಲ್ಲಿ' ಅವರು ತೊಡಗುವಂತೆ ಮಾಡಿದ್ದೂ ಜಾಗತೀಕರಣ. "ಅಪ್‍ನಾ ಸಪ್‍ನಾ ಮನಿ-ಮನಿ" -ಎಂದು ಜನತೆ ಕೂಗಿಕೊಳ್ಳಲೂ ಜಾಗತೀಕರಣವೇ ಕಾರಣ.
"ಸಂಸ್ಕೃತ" ನಮ್ಮ ಪೂಜ್ಯ ಭಾಷೆ; ದೇವ ಭಾಷೆ. ಇದೇ ಸಂಸ್ಕೃತವನ್ನು ಇಂದು ಅಭ್ಯಸಿಸುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಜನತೆಯನ್ನು ಕೇವಲ ಲೌಕಿಕ ಸುಖದತ್ತ ಆಕರ್ಷಿಸಿ, ಹಣ ಗಳಿಸುವ ಸುಲಭ ಮಾರ್ಗವನ್ನು ತೋರಿಸಿದ್ದೂ ಜಾಗತೀಕರಣದ ಹೆಗ್ಗಳಿಕೆ! ಎಲ್ಲ ಶಾಲಾ ವಿದ್ಯಾರ್ಥಿಗಳೂ ಇನ್ದು "ವ್ಯಾವಹಾರಿಕ ಶಿಕ್ಷಣ"ದತ್ತಲೇ ತಲೆ ಹಾಕುವಂತೆ ಮಾಡಿ, ಇದಕ್ಕೆ ಗೊಬ್ಬರ ಹಾಕುವಂತೆ ಕಂಡಲ್ಲೆಲ್ಲಾ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದದ್ದೂ ಜಾಗತೀಕರಣದಿಂದಾಗಿಯೇ!!
ಹಾಗೆಂದ ಮಾತ್ರಕ್ಕೆ ಜಾಗತೀಕರಣವು ಸಂಪೂರ್ಣ "ವಜ್ರ್ಯ"ವಲ್ಲ. ಇಂದು ಹಳ್ಳಿಯ ಸಾಮಾನ್ಯ ಕೃಷಿಕನ ಮಗನೂ ಅಮೇರಿಕಾದ ಕನಸು ಕಾಣುವಂತಾದದ್ದು, ನಮ್ಮ 'ವೆಂಕಜ್ಜಿ'ಯೂ, ಮೊಮ್ಮಗಳ ಬಾಣಂತನದ ನೆಪದಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲು ಸಾಧ್ಯವಾದದ್ದು ಜಾಗತೀಕರಣದಿಂದಾಗಿಯೇ. ನಮ್ಮ ಬೆಂಗಳೂರಿನ ದೇವನಹಳ್ಳಿಯನ್ನೊಮ್ಮೆ ನೋಡಿ: ಯಾವಾಗ ಅಲ್ಲಿ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ" ಸ್ಥಾಪಿಸಲಾಗುವುದೆಂಬ ಸುದ್ದಿ ಹರಡಿತೋ, ಅಂದಿನಿಂದ ಅಲ್ಲಿನ ಭೂಮಿಯ ಕಣ-ಕಣವೂ ಚಿನ್ನವಾಗುತ್ತಿದೆ! ರೈತರು ಟ್ರಾಕ್ಟರ್ ಬಿಟ್ಟು, 'benz" ಕಾರಿನಲ್ಲಿ ಬೆಂಗಳೂರು ಮಾಯಾನಗರಿಯಲ್ಲಿ ಸುತ್ತುತಿದ್ದಾರೆ. ಸಾಂಸ್ಕೃತಿಕ ನಗರಿಗಳು "ಅoಡಿಠಿoಡಿಚಿಣe ಅಚಿಠಿiಣಚಿಟ"ಗಳಾಗಿ ವಿಶ್ವ ನಕಾಶೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಕೂಪ ಮಂಡೂಕಗಳು ಸಾಗರವನ್ನು ಕಾಣುತ್ತಿವೆ!
ಮಹಿಳಾ ನಾಗರಿಕರ ಜೀವನ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ಎಲ್ಲಾ ಮಹಿಳೆಯರಿಗೂ "ಗಾರ್ಗಿ-ಮೈತ್ರೇಯಿ"ಯವರಂತಾಗುಗುವ ಅವಕಾಶ ಲಭಿಸಿದೆ. ಪುರುಷರಿಗೆಂದೇ ಮೀಸಲಾಗಿದ್ದ ಹಲವು ಕ್ಷೇತ್ರಗಳಲ್ಲಿ ಮಹಿಳೆಯರೂ ಯಶಸ್ವಿಯಾಗಿ ತಮ್ಮ ಕೈಯ್ಯಾಡಿಸುತ್ತಿದ್ದಾರೆ.
ಹತ್ತೊಂಭತ್ತನೇ ಶತಮಾನದ ಆರಂಭದ ವೇಳೆಗೆ ಜನಸಂಖ್ಯಾ ಸ್ಫೋಟ, ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದ ಭಾರತ,2020ರ ವೇಳೆಗೆ "ಪ್ರಬಲ ಭಾರತ"ವಾಗುವ ಕನಸು ಕಾಣುತ್ತಿದೆಯೆಂದರೆ ಕಾರಣವೇನು? -ಅದೇ ಜಾಗತೀಕರಣ,ಅದೇ ಗ್ಯಾಟ್ ಒಪ್ಪಂದ, ಅದೇ 'WTO" ಸಹಕಾರ. ಭಾರತಕ್ಕೆ ಇಂದು ವಿದೇಶೀ ನೆರವು ಹಲವು ರೂಪದಲ್ಲಿ ಹರಿದು ಬರುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ, ವಿದ್ಯಾ ಕ್ಷೇತ್ರದಲ್ಲಿ, ಆರ್ಥಿಕವಾಗಿ ಭಾರತ ಸಧೃಡವಾಗುತ್ತಿದೆ. ಆಫಿû್ರಕಾದ ಬಡ ರಾಷ್ಟ್ರಗಳಿಗೆ 'ಸಾಲ' ನೀಡುವ ಶಕ್ತಿ ಭಾರತಕ್ಕೆ ಬಂದಿದೆ. ಹಲವು ಬಹು ರಾಷ್ಟ್ರೀಯ ಕಂಪನಿಗಳು(ಒಓಅ's)ಭಾರತದಲ್ಲಿ ಬಂದವಾಳ ಹೂಡಲು ಮುಂದೆ ಬರುತ್ತಿವೆ. ಭಾರತೀಯ ವೈದ್ಯ, ಯಾ ತಾಂತ್ರಿಕರು ಹಲವರು ವಿದೇಶಗಳಲ್ಲಿ ಮಿಂಚುತಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹಲವು ಭಾರತೀಯ ಕುಬೇರರೂ ಪಟ್ಟ ಗಿಟ್ಟಿಸಿದ್ದಾರೆ.
ಇದೇ ಆಗಿದ್ದರೆ, ಯಾವತ್ತೋ ನಾವು ಸಂತಸದಿಂದ, ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯಬಹುದಾಗಿತ್ತು, ಆದರೆ, ಪ್ರಸ್ತುತ ನಮ್ಮಲ್ಲಿ ಗಾಬರಿ ಹುಟ್ಟಿಸುವಂತಹ ಅಂಶವಾದರೂ ಏನು?
ಉತ್ತರ ಬಲು ಸರಳ. ಇಂದಿನ ಭಾರತ, ಹಿಂದೆ ಮಾಟ-ಮಂತ್ರ ಮಾಡುತ್ತಿದ್ದರೆನ್ನಲಾದ ಮಾಂತ್ರಿಕರ ಕೈಯಲ್ಲಾಗಲೀ, ಅಥವಾ ಜಗತ್ತೇ ಮೂಗಿಗೆ ಬೆರಳಿಟ್ಟು ನೋಡುತ್ತಿರುವ ನಮ್ಮ ಹೆಮ್ಮೆಯ ವಿಜ್ನಾನಿಗಳ ಕೈಯಲ್ಲಾಗಲೀ ನಿಂತಿಲ್ಲ: ಇದು ಇಂದು ನಿಂತಿರುವುದು ಪುಂಡ ಪುಢಾರಿಗಳಂತಿರುವ, ಸಿಕ್ಕಲ್ಲೆಲ್ಲಾ 'ಪುಂಗುವ' ಸ್ವಾರ್ಥಿ ರಾಜಕಾರಣಿಗಳ ಕೈಯ್ಯಲ್ಲಿ. ಕೇವಲ ಪ್ರತಿಭೆಯೇ ಮಾನದಂಡವಾಗಿರುವ ಜಾಗತೀಕರಣಗೊಂಡ ಜಗತ್ತಿಗೇ ಜಾತ್ಯಾಧಾರಿತ ಮೀಸಲಾತಿಯನ್ನು ಸಾರುವ, ಇವರಿಂದ ನಾವು ಒಳ್ಳೆಯದನ್ನು ಹೇಗೆ ನಿರೀಕ್ಷಿಸಬಹುದು? "ನಮಗೆ ಪ್ರತಿಭೆಯೇ ಮಾನದಂಡ" ಎಂದ "Iಟಿಜಿosಥಿs"ನ ನಾರಾಯಣ ಮೂರ್ತಿಗೇ ಸಡ್ಡು ಹೊಡೆಯುವ, IIಖಿ, ಂIIಒSಗಳಲ್ಲೇ ಔ.ಃ.ಅಯವರಿಗೆ 27% ಮೀಸಲಾತಿಯನ್ನಿಡ್ವ ರಾಜಕಾರಣಿಗಳ ಕೈಯಲ್ಲಿ, ಸತ್ಕಾರ್ಯವನ್ನು ನಿರೀಕ್ಷಿಸುವುದಾದರೂ ಹೇಗೆ? ಇದೇ ಕಾರಣಕ್ಕೆ, ಹೂವಾಗಬೇಕಾದದ್ದು ಹಾವಾಗಿ ಪರಿಣಮಿಸಿದೆ. ಜಾಗತೀಕರಣವು ತನ್ನ ಮನೆಯಲ್ಲೇ ಪರಕೀಯವಾಗಿದೆ. "SEZಗಳ ಹೆಸರಲ್ಲಿ, ರಾಜಕಾರಣಿಗಳು ಸ್ವಾಹಾ ಮಾದುತ್ತಿದ್ದಾರೆ!!
"ವಸುಧೈವ ಕುಟುಂಬಕಂ" ಎಂಬುದು ನಮ್ಮ ಪೂರ್ವಜರ ಕಲ್ಪನೆಯ ಕೂಸು. ಅಂದರೆ, ಈ ಭೂಮಂಡಲವನ್ನೇ ತನ್ನ ಕುಟುಂಬದಂತೆ ಕಾಣಬೇಕೆಂಬುದು ಇದರ ತಾತ್ಪರ್ಯ. ಅದಕ್ಕೆ ಹೊಸ ಆಯಾಮವನ್ನು ನೀಡುತ್ತಿರುವುದು, ಹೊಸ ರೀತಿಯ ಜೀವನ ಕ್ರಮವನ್ನು ಜನರಿಗೆ ಪರಿಚಯಿಸುತ್ತಿರುವುದು ಈ ಜಾಗತೀಕರಣ. ಹೌದು; "ಅhಚಿಟಿge is ಣhe esseಟಿಛಿe oಜಿ ಟiಜಿe!!" ಆದರೆ, ಆ 'ಛಿhಚಿಟಿge' ಒಳ್ಳೆಯದಕ್ಕಾದರೆ ಮಾತ್ರ!. ಜಾಗತೀಕರಣದಿಂದಾಗುತ್ತಿರುವ ಬದಲಾವಣೆಯೂ ಒಳ್ಳೆಯದಕ್ಕೇ ಆಗಬೇಕು. ಆ "esseಟಿಛಿe" ಅನ್ನು ನಾವು ಸವಿಯಬೇಕು. ಅದಕ್ಕಾಗಿ, ಇಂದು ಬೇಕಾಗಿರುವುದು ಸಮರ್ಥವಾದ ನಾಯಕತ್ವ, ಸ್ಪಟಿಕ ಶುದ್ಧ ಮನಸ್ಸಿನ ದೂರದೃಷ್ಟಿ. ಅಂತಹ ಪ್ರಭಾವೀ ನಾಯಕ, ನಮ್ಮೊಳಗಿನ ನಾಗರಿಕರಲ್ಲೇ ಇರುವವನು. ಇನ್ನೂ ಹೇಳಬೇಕೆಂದರೆ, ಜಾಗತೀಕರಣವು ಗುಣಪಡಿಸಲಾಗದ "ಏಡ್ಸ್" ರೊಗದ ಹಂತಕ್ಕೇನೂ ಬಂದಿಲ್ಲ!. ಅರೋಗ್ಯಕರವಾಗಿಲ್ಲ ಅಷ್ಟೇ. ಅದರಿಂದಾಗಿಯೇ, ಸಮಸ್ತ ನಾಗರಿಕರ ಜೀವನವೂ ಅನಾರೊಗ್ಯಕರವಾಗಿರುವುದು.
ಜಾಗತೀಕರಣಕ್ಕೆ ಹಿಡಿದಿರುವ ಈ ರೊಗದ ಬೇರು ಸಹಿತ ನಾಶದ ದಿನವು ಶೀಘ್ರವಾಗಿ ಬರಲಿ -ಎಂದು ಹಾರೈಸೊಣ
-ಅಲ್ಲವೆ?!

Thursday, February 11, 2010

ಹಾಯ್! ಮೈಸೂರು !!!

ಭಾಗ- ೧

ಮೈಸೂರು ನಗರದಲಿ ಮೊದಲ ಹೆಜ್ಜೆಯನಿಟ್ಟು
ಇನ್ನೇನು ಎರಡನೆಯ ಪಾದವನ್ನೂರಬೇಕೆಂದು
ನಾನೆಣಿಸುತ್ತಲಿರುವಾಗ ಧುತ್ತೆಂದು ಬಂದನಾ ಅಟೋ ಡ್ರೈವರು |
ಸಾರ್, ನಿಮಗೆಲ್ರಿ ಹೋಗಬೇಕೆಂದಾತ ಕೇಳಲೂ
ಮುದದಿ ರಿಕ್ಷವನೇರಿ SJCಗೆನ್ನುತಲಿ
ನಗರ ಸೌಂದರ್ಯ ವೀಕ್ಷಿಸುತ್ತಿರುವಾಗಲೇ ಕಾಲೇಜು ಕಂಡಿತು ||


ಅಡ್ಮಿಶನ್ ಮುಗಿದು ನಿಲ್ದಾಣಕ್ಕೆ ಬರುತಿರಲು
ದಾರಿಬದಿ ಕಂಡ ನೂರಾರು ಹೂದೋಟಗಳು!
ನೂರಾರು ಹೊಂಡವಿಹ ನಮ್ಮ ಹಳ್ಳೀ ರಸ್ತೆ ಕಣ್ಣೆದುರು ಕುಣಿಯಿತು |
ಒಟ್ಟಿನಲಿ ಮೈಸೂರು ಮುದವನ್ನು ನೀಡಲಿದೆ
ಸಾಂಸೃತಿಕ ನಗರಿಯಿದು ಮನವನ್ನು ತಣಿಸಲಿದೆ
ಅತ್ಯುಚ್ಚ ಸಾಧನೆಯ ಜೀವಿತಡಿ ಮಾಡಲೆನ್ನನು ಇಲ್ಲಿಗಾಹ್ವಾನಿಸಿಹುದು ||


ಭಾಗ- ೨


ಹಾಸ್ಟೆಲ್ಲಿ ಕೂರುತಲಿ ಮನೆಯ ನೆನಪಾಗುತಿದೆ
ನಮ್ಮ ಹಳ್ಳಿಯ ಅಂದ ಕಣ್ಣೆದುರು ಕುಣಿಯುತಿದೆ
ಸತ್ಯಸ್ಯ ಸತ್ಯವೀ ಮಾತು- "ಜನನೀ ಜನ್ಮ ಭೂಮೀ ಶ್ರೇಷ್ಟವು |
ತರಗತಿಯ ಮೂಲೆಯಲು ಮನೆಯನ್ನು ಹುಡುಕುತಿಹೆ
ನಮ್ಮೂರ-ಮೈಸೂರ ತುಲನೆಯನು ಮಾಡುತಿಹೆ
ಛೆ! ಬೇಗನೇ ಕಳೆಯಲೀ ನಾಲ್ಕು ವರುಷಗಳೆಂಬ ಪ್ರಾರ್ಥನೆಯ ಜೊತೆಗೆ! ||

ಒದಲೋಸುಗ ಪುಸ್ತಕಗಳನ್ನು ಹಿಡಿದರೂ
ಮನೆಮಂದಿಯಾ ಚಿತ್ರಪಟಗಳೇ ಮೂಡುತಿವೆ!
ಹೀಗಾದ್ರೆ exams ನಾ ಪಾಸಾಗೋದು ಹೇಗೆ ಸಾಧ್ಯವೋ ಶಿವನೇ...? |
ನಮ್ಮೂರ ತುಳುವಿಲ್ಲ; ಕನ್ನಡವೂ ಹಾಗಲ್ಲ
ಸಂಪೂರ್ಣ ಡಿಫರೆಂಟು ಮೈಸೂರು ನಗರವಿದು
ಸಂಪೂರ್ಣ ಬೆಳೆದ ಮರವನ್ನು ಕಿತ್ತಿಟ್ಟಂತೆ ನನ್ನದೀ ಪಾಡು! ||

ಸತತ ಮೂರ್-ದಿನಕಿಂತ ಹೆಚ್ಚು ರಜೆಗಳ ಸಾಲು
ಯಾವಾಗ ಬರುವುದೋ ತರುವುದೋ ಸಂತಸವ
ಎಂಬ ಕನಸಲ್ಲೆ ನನ್ನೂರ ಕಾಣುತ್ತ ಕ್ಯಾಲೆಂಡರ್ ನೋಡುತಿರುವೆ! |




ಭಾಗ- 3

ಹಾಯ್! ಎಷ್ಟೊಂದು ಬೇಗನೇ ಕಳೆದು ಹೋಯಿತೀ
ನಾಲ್ಕು ವರುಷಗಳೆಂಬ ಅಪರಂಜಿ ಘಳಿಗೆಗಳು
ಈ ಮಧ್ಯೆ ನಾ ದಾಟಿರುವ ದಶಕೋಟಿ ಕ್ಷಣ ಕಣಗಳು |
ನಮ್ಮೂರು-ಮೈಸೂರು ಬೇರೆ ಏನೂ ಅಲ್ಲ
adjust ಆಗಲು ಮಾತ್ರ ಸಮಯವದು ಹಿಡಿಯುವುದು!
ಹಾಸ್ಟೆಲ್ಲು ಕಾಲೇಜು ನನ್ನ ಮನೆಯಾಗಿಹುದು ಉತ್ಪ್ರೇಕ್ಷೆಯಲ್ಲವೋ ||

ಪೂರ್ವಜನ್ಮದಲಿ ನಾನು ಮಾಡಿದ್ದ ಪುಣ್ಯವು
ಸ್ನೇಹಿತರ ರೂಪದಲಿ ನನ್ನೆದುರು ನಲಿಯುತಿದೆ
ಮುಂಬರುವ ಜನ್ಮದಳು ಇವರನ್ನೇ ಕರುಣಿಸೋ ಓ ನನ್ನ ಪ್ರಭುವೇ... |
ಸಾಸ್ಕೃತಿಕ ನಗರಿಯಿದು-ಸ್ವಚ್ಚಂದ ನಗರಿಯಿದು
ನೂರಾರು ಪಾಠಗಳ ಜೀವನದಿ ಕಲಿಸಿಹುದು
ದೇವ ವರವನು ಕೊಟ್ರೆ ದೇವಲೋಕವ ಬಿಟ್ಟು ಮೈಸೂರ ಆಯ್ದುಕೊಳುವೆ!!! ||

_____________________________________________________

[ಮೈಸೂರಿಗೆ ಕಾಲಿಟ್ಟ ಹೊಸತರಲ್ಲಿ ಬರೆದಿದ್ದ ಕವನವಿದು]

Tuesday, November 24, 2009

ಇಂಚರ

ಪಕ್ಷಿಗಳ ಇಂಚರದಿ ಆಹ್ಲಾದಗೊಂಡು ರವಿ
ರಭಸದಿಂದೇರುವನು ಪೂರ್ವ ನಭದಿಂದ |
ಚರಾಚರ ಜೀವ ಕುಲ ಹುರುಪಿನಿಂ ಬೆಳಗುವುದು
ಇಂಚರದ ಚಲನೆಯಿರೆ ಜಗವೆಲ್ಲ ಅಂದ ||

ನೂಪುರದ ನರ್ತನವು ರಸಿಕತೆಯ ತುಂಬುವುದು
ಅಪ್ಸರೆಯ ನೆನಹಿನಲಿ ಕಾಣುವುದು ನಾಕ |
ಸಪ್ತಸ್ವರ ಹೊರಡಿಸುವ ಶಾರದೆಯ ವೀಣೆಯಿಂ
ಸಾರ್ಥಕ್ಯ ಭಾವ ಹೊಂದುವ ಮನುಜ ಲೋಕ ||

ಪಾಂಚಜನ್ಯದ ನಾದ ಠೇಂಕಾರದಿಂ ಅಂದು
ಸದ್ಧರ್ಮ ಜಯಿಸಿತ್ತು; ತೊಲಗಿ ಭೂಭಾರ |
ವಿಹಗಗಳ ಇಂಚರವು ಸುಶ್ರಾವ್ಯವೆನಿಸುವುದು
'ಶ್ರವ'ವನೂ ಬೀಳಿಪುದು ಅನಿವಾರ್ಯವಾಗೆ! ||

ಆಸಕ್ತ ಕಿವಿಯಿರಲು ಚಿಲಿಪಿಲಿಯೂ ಚೆಂದ!
ಕಾಳೊಂದ ಕಂಡ ಬಲು ಖಗಗಳುನ್ಮಾದ |
ಕಲರವವು ಮೂಡುವುದು ಕೂಡಿ ನಡೆದಾಗ
ಇಂಚಿಂಚು ಜೀವನದಿ ಕಾಣುವೆವು ಮೋದ ||

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...